ಯಲಹಂಕ: ‘ಇತ್ತೀಚಿನ ದಿನಗಳಲ್ಲಿ ಕಸವನ್ನು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ, ಹಳ್ಳಿಗಳಲ್ಲಿಯೂ ಕಸದ ಸಮಸ್ಯೆ ಉಲ್ಬಣವಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ಜೀವನ ನಡೆಸುವುದೇ ದುಸ್ತರವಾಗಲಿದೆ’ ಎಂದು ಶಾಸಕ ಕೃಷ್ಣಬೈರೇಗೌಡ ಎಚ್ಚರಿಸಿದರು.
ಬೆಟ್ಟಹಲಸೂರು–ಕುದುರೆಗೆರೆ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ‘ಜನರು ಜಾಗೃತರಾಗಿ ಮನೆ ಯಲ್ಲಿಯೇ ಹಸಿ ಮತ್ತು ಒಣಕಸವನ್ನು ವಿಂಗಡಿಸಿ ಕೊಡುವುದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ’ ಎಂದರು.
‘ತಿಪ್ಪೆಗೊಬ್ಬರಕ್ಕೆ ಸಾಕಷ್ಟು ಬೇಡಿಕೆಯಿರುವುದರಿಂದ ನಿಮ್ಮ ಮನೆಗಳಲ್ಲಿ ಕಸವನ್ನು ವಿಂಗಡ ಣೆಮಾಡಿ ನೀಡಿದರೆ, ಹಸಿಕಸವನ್ನು ತಿಪ್ಪೆಗೊಬ್ಬರವನ್ನಾಗಿ ಪರಿವರ್ತಿಸಬಹುದಾಗಿದೆ. ಒಣಕಸವನ್ನು ಮರುಬಳಕೆಮಾಡುವ ಸಲುವಾಗಿ ಕಾರ್ಖಾನೆಗಳು ಕೊಂಡುಕೊಳ್ಳಲು ತಯಾರಿವೆ. ಜನರು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರಿಂದ ಯಾವುದೂ ತ್ಯಾಜ್ಯ ಕಸವಾಗದೆ ಎಲ್ಲವೂ ಉಪಯೋಗಕ್ಕೆ ಬರಲಿದ್ದು, ಇದರಿಂದ ಗ್ರಾಮಗಳು ಸ್ವಚ್ಚವಾಗಿರಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.