ಬಂಧನ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ ಮಾಡಿ ವಂಚಿಸುತ್ತಿದ್ದ ಆರೋಪಿಯನ್ನು ಯಲಹಂಕ ನ್ಯೂಟೌನ್ ಠಾಣೆಯ ಪೊಲೀಸರು ಹೊರ ರಾಜ್ಯದಲ್ಲಿ ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ.
ಪ್ರದೀಪ್ ಅಲಿಯಾಸ್ ‘ಪಾಯಿಸನ್’ ಪ್ರದೀಪ್ ಬಂಧಿತ ಆರೋಪಿ.
‘ವಂಚನೆ ಸಂಬಂಧ ಇಬ್ಬರು ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು. ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
‘ವಿದ್ಯಾರಣ್ಯಪುರ, ಯಲಹಂಕ, ಯಲಹಂಕ ನ್ಯೂಟೌನ್ ಸೇರಿದಂತೆ ಹಲವು ಕಡೆಯ ನಿವಾಸಿಗಳಿಗೆ ಆರೋಪಿ ವಂಚಿಸಿದ್ದಾನೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಬೇರೆಯವರ ನಿವೇಶನಕ್ಕೆ ಆರೋಪಿ ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ನಂತರ, ನನ್ನದೇ ನಿವೇಶನ ಎಂಬುದಾಗಿ ನಂಬಿಸಿ ಮಾರಾಟ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ಆರೋಪಿ ಪ್ರದೀಪ್, ರೌಡಿಶೀಟರ್ ಆಟೊರಾಮನ ಶಿಷ್ಯ. ಆಟೊ ರಾಮನ ಜತೆಗೆ ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ಸರ್ಕಾರಿ ಅಧಿಕಾರಿಗಳನ್ನೇ ಹುಡುಕಿ ಅವರಿಗೆ ಮಾರಾಟ ಮಾಡುತ್ತಿದ್ದ. ಈ ರೀತಿ ದಂಧೆ ನಡೆಸಿ ಆರೋಪಿ ಕೋಟ್ಯಂತರ ರೂಪಾಯಿ ಗಳಿಸಿರುವುದು ತನಿಖೆಯಿಂದ ಪತ್ತೆಯಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾನ್ಸ್ಟೆಬಲ್ಗಳು, ಪೊಲೀಸ್ ಅಧಿಕಾರಿಗಳಿಗೂ ಆರೋಪಿ ವಂಚನೆ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
‘ಪ್ರಕರಣದ ಕುರಿತು ಇಬ್ಬರು ಮಾತ್ರ ದೂರು ನೀಡಿದ್ದಾರೆ. ವಂಚನೆಗೆ ಒಳಗಾದ ಬಗ್ಗೆ ಯಾವುದೇ ಪೊಲೀಸ್ ಸಿಬ್ಬಂದಿ ದೂರು ನೀಡಿಲ್ಲ. ದೂರು ನೀಡಿದರೆ ತನಿಖೆ ನಡೆಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.