ರಘು ದೀಕ್ಷಿತ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು
ಕೆಂಗೇರಿ: ಯಶವಂತಪುರ ಕ್ಷೇತ್ರ ಯುವ ದಸರಾ ಅಂಗವಾಗಿ ನಡೆದ ಪುರುಷ ಹಾಗೂ ಮಹಿಳೆಯರ ಫ್ಯಾಷನ್ ಶೋ ಕಾರ್ಯಕ್ರಮ ದಲ್ಲಿ ಆದಿತ್ಯ ಆದ್ಯ ಸ್ವಾಮಿ ಹಾಗೂ ಅನುಷಾ ಕ್ರಮವಾಗಿ ‘ಯುವರಾಜ ಆಫ್ ಯಶವಂತಪುರ ಕ್ಷೇತ್ರ-2025’ ಮತ್ತು ‘ಯುವರಾಣಿ ಆಫ್ ಯಶವಂತಪುರ ಕ್ಷೇತ್ರ 2025’ ಪ್ರಶಸ್ತಿಗೆ ಭಾಜನರಾದರು.
ನವರಾತ್ರಿ ಅಂಗವಾಗಿ ಯಶವಂತಪುರ ಕ್ಷೇತ್ರದ ಕೆಂಗೇರಿ ಗಣೇಶ ಆಟದ ಮೈದಾನದಲ್ಲಿ ಆಯೋಜನೆಗೊಂಡಿದ್ದ ಯುವ ದಸರಾದ ಭಾಗವಾಗಿ ಫ್ಯಾಷನ್ ಶೋ ಹಾಗೂ ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಕಾಲೇಜು ವಿದ್ಯಾರ್ಥಿನಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಮ್ಮ ಪ್ರತಿಭೆ ಹಾಗೂ ಸೌಂದರ್ಯದಿಂದ ತೀರ್ಪುಗಾರರ ಮನಗೆದ್ದ ಅನುಷಾ ಹಾಗೂ ಆದಿತ್ಯ ಆದ್ಯ ಸ್ವಾಮಿ ಕ್ರಮವಾಗಿ ಯುವರಾಣಿ ಹಾಗೂ ಯುವರಾಜ ಪ್ರಶಸ್ತಿಗೆ ಆಯ್ಕೆಯಾದರು.
ಎರಡು ದಿನದ ಈ ಕಾರ್ಯಕ್ರಮದಲ್ಲಿ ಮೊದಲನೆ ದಿನ ಆಯೋಜನೆಗೊಂಡಿದ್ದ ಕಾಲೇಜು ಯುವಕ ಯುವತಿಯರ ನೃತ್ಯ ಹಾಗೂ ಫ್ಯಾಷನ್ ಷೋ ಜನರ ಮನಸೂರೆಗೊಂಡಿತ್ತು. ಶನಿವಾರ ಸಂಜೆ ನಡೆದ ಸ್ವರ ಮಾಂತ್ರಿಕ ರಘು ದೀಕ್ಷಿತ್ ಅವರ ಸಂಗೀತ ಸಂಜೆ ಕಲಾ ರಸಿಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಕ್ಷೇತ್ರದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಸಂಗೀತ ಪ್ರಿಯರು ರಘು ದೀಕ್ಷಿತ್ ತಂಡದ ಹಾಡುಗಳಿಗೆ ಹೆಜ್ಜೆ ಹಾಕಿ ಖುಷಿ ಪಟ್ಟರು. ಶಿಳ್ಳೆ ಚಪ್ಪಾಳೆ ಹಾಕಿ ಸಂತಸ ವ್ಯಕ್ತ ಪಡಿಸಿದರು.
ಶಾಸಕ ಎಸ್. ಟಿ. ಸೋಮಶೇಖರ್ ಮಾತನಾಡಿ, ಮುಂದಿನ ದಿನಗಳಲ್ಲಿ ನಾಲ್ಕು ದಿನ ಕಾರ್ಯಕ್ರಮ ಆಯೋಜಿಸಲಾಗುವುದು. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಸಾಂಸ್ಕೃತಿಕ
ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳ ಬೇಕು ಎಂದರು
‘ಗೆಳೆಯರು ಹಾಗೂ ಹಿತೈಷಿಗಳ ಸಹಕಾರದಿಂದ ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈ ಸಿರುವೆ. ಸಹಕಾರ ನೀಡಿರುವ ಎಲ್ಲರಿಗೂ ಧನ್ಯವಾದಗಳು’ ಎಂದು ರಘು ದೀಕ್ಷಿತ್ ನೆನಪಿಸಿಕೊಂಡರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.