ವಿಡಿಯೊ ಮಾಡಿರುವ ಯೂಟ್ಯೂಬರ್ ಸಮೀರ್
ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಎಂ.ಡಿ.ಸಮೀರ್ ಅವರು ವಾಸವಾಗಿದ್ದ ಬನ್ನೇರುಘಟ್ಟದ ಹುಲ್ಲಹಳ್ಳಿಯ ಬಾಡಿಗೆ ಮನೆಯ ಮೇಲೆ ಗುರುವಾರ ದಾಳಿ ನಡೆಸಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸರು, ಕೆಲವು ಉಪಕರಣಗಳು ಹಾಗೂ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ನ್ಯಾಯಾಲಯದಿಂದ ವಾರಂಟ್ ಪಡೆದು ಮನೆಯಲ್ಲಿ ಶೋಧ ನಡೆಸಿದ್ದಾರೆ ಎಂಬುದು ಗೊತ್ತಾಗಿದೆ.
ಇನ್ಸ್ಪೆಕ್ಟರ್ ನಾಗೇಶ್ ಖದ್ರಿ ನೇತೃತ್ವದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ವಿಭಾಗದ ಸಿಬ್ಬಂದಿ ಹಾಗೂ ಪೊಲೀಸರು ಸಮೀರ್ ಮನೆಯಲ್ಲಿ ಶೋಧ ನಡೆಸಿದರು.
‘ಕೃತಕಬುದ್ಧಿಮತ್ತೆ (ಎಐ) ಆಧರಿಸಿ ಸಮೀರ್ ಅವರು ವಿಡಿಯೊವೊಂದನ್ನು ಮಾಡಿದ್ದರು. ಆ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲೂ ಅಪ್ಲೋಡ್ ಆಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ಸಮೀರ್ ಅವರನ್ನು ಎರಡು ಬಾರಿ ವಿಚಾರಣೆ ನಡೆಸಿತ್ತು. ಅವರು ವಿಚಾರಣೆಗೆ ಸಹಕಾರ ನೀಡಿರಲಿಲ್ಲ. ಕಂಪ್ಯೂಟರ್ ಸೇರಿ ಇತರೆ ವಸ್ತುಗಳನ್ನು ತಂದಿರಲಿಲ್ಲ. ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಪರಿಶೀಲನೆ ನಡೆಸಲಾಗಿದೆ. ವಿಡಿಯೊ ಎಡಿಟ್ ಮಾಡಲು ಬಳಸಿದ್ದ ಕಂಪ್ಯೂಟರ್ ಮತ್ತು ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.
ಸಮೀರ್ ಮನೆಯಲ್ಲಿ ಪರಿಶೀಲನೆ ನಡೆಸಲು ಆಗಸ್ಟ್ 22ರಂದು ಪೊಲೀಸರು ಬಂದಿದ್ದರು. ಅಂದು ಸಮೀರ್ ಇಲ್ಲದ ಕಾರಣ ಪೊಲೀಸರು ವಾಪಸ್ ತೆರಳಿದ್ದರು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.