ADVERTISEMENT

ಧರ್ಮಕ್ಕೆ ಜಮೀರ್‌ ಕಳಂಕ ತರುತ್ತಿದ್ದಾರೆ: ಜಫ್ರುಲ್ಲಾ ಖಾನ್‌

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 19:18 IST
Last Updated 17 ಅಕ್ಟೋಬರ್ 2021, 19:18 IST

ಬೆಂಗಳೂರು: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರನ್ನು ಬಳಸಿಕೊಂಡು ಕೆಲಸ ಮಾಡಿಸಿಕೊಂಡ ಜಮೀರ್‌ ಅಹಮ್ಮದ್ ಖಾನ್‌ ಈಗ ಅವರ ವಿರುದ್ಧವೇ ಮಾತನಾಡುವ ಮೂಲಕ ಇಸ್ಲಾಂ ಧರ್ಮಕ್ಕೆ ಕಳಂಕ ತರುತ್ತಿದ್ದಾರೆ ಎಂದು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್‌ ಆರೋಪಿಸಿದರು.

ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮ್ಮದ್ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ನೀಡಿದ್ದ ಹೇಳಿಕೆ ಕುರಿತು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಜಫ್ರುಲ್ಲಾ, ‘ಕುಮಾರಸ್ವಾಮಿ ಒಂದು ಸಂದರ್ಭದಲ್ಲಿ ದಾರಿ ತಪ್ಪಲು ಇವರೇ ಕಾರಣ. ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದಾಗ ಮುತ್ತು ಕೊಟ್ಟು ಸಂಭ್ರಮಿಸಿದ್ದು ಯಾರು’ ಎಂದು ಹೆಸರನ್ನು ಉಲ್ಲೇಖಿಸದೇ ಪ್ರಶ್ನಿಸಿದರು.

ಸಿದ್ದರಾಮಯ್ಯ ಒಬ್ಬರೇ ಅಲ್ಪಸಂಖ್ಯಾತರ ನಾಯಕ ಎಂದು ಅವರು ಹೇಳುತ್ತಾರೆ. ಹಾಗಾದರೆ ಡಿ.ಕೆ. ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಅವರೆಲ್ಲರೂ ಯಾರು? ಅವರ ಪಾತ್ರ ಏನು? ಕುಮಾರಸ್ವಾಮಿ ಅವರನ್ನು ಚರ್ಚೆಗೆ ಕರೆಯುವ ಯೋಗ್ಯತೆ ಇವರಿಗೆ ಇದೆಯಾ ಎಂದು ಕೇಳಿದರು.

ADVERTISEMENT

ಹಾಸನದಲ್ಲಿ ಮುಸ್ಲಿಮರಿಗೆ ಜೆಡಿಎಸ್‌ ಟಿಕೆಟ್‌ ನೀಡುವಂತೆ ಸವಾಲು ಹಾಕಿದ್ದಾರೆ. ವರುಣಾ, ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಟಿಕೆಟ್‌ ನೀಡಿ, ಗೆಲ್ಲಿಸಲಿ. ಆಗ ಇವರ ಜಾತ್ಯತೀತ ತತ್ವವನ್ನು ಮೆಚ್ಚಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.