ADVERTISEMENT

ಆಂಗ್ಲ ಭಾಷಾ ನಾಮಫಲಕ ದರ್ಬಾರ್!

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2012, 10:20 IST
Last Updated 1 ನವೆಂಬರ್ 2012, 10:20 IST

ಹುಮನಾಬಾದ್: ಕನ್ನಡ ಕಡ್ಡಾಯ ಕುರಿತಂತೆ ಸರ್ಕಾರ ಹೊರಡಿಸಿರುವ ಸುತ್ತೋಲೆಗಳು ಅಸಂಖ್ಯಾತ. ಅವುಗಳಲ್ಲಿ ಅನುಷ್ಠಾನಕ್ಕೆ ಬಂದಿದ್ದು ಮಾತ್ರ ಕನಿಷ್ಟ. ಉನ್ನತ ಹುದ್ದೆಯಲ್ಲಿ ಇರುವ ಅಧಿಕಾರಿ ವರ್ಗ ಹೊರಡಿಸಲಾದ ಆದೇಶ ಪಾಲನೆ ವಿಷಯದಲ್ಲಿ ಕೆಳ ಹಂತದ ಅಧಿಕಾರಿಗಳು ತಾಳುತ್ತಿರುವ ದಿವ್ಯ ನಿರ್ಲಕ್ಷ್ಯಕ್ಕೆ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿನ ಆಂಗ್ಲ ನಾಮಫಲಕ ತಾಜಾ ನಿದರ್ಶನ.

ಪ್ರತೀ ವರ್ಷದ ನವೆಂಬರ್ ತಿಂಗಳಲ್ಲಿ ಆಚರಿಸಲ್ಪಡುವ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದ ದಿನ ವಿದ್ವಾಂಸರು, ಗಣ್ಯರ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರ ಬಾಯಿಯಿಂದ ಕೇಳಿ ಬರುವ ಕನ್ನಡದ ಬಗೆಗಿನ ಅಭಿಮಾನದ ಮಾತುಗಳು ಕೇವಲ ವೇದಿಕೆಗೆ ಸೀಮಿತಗೊಂಡರೇ ಸಾಲದು. ಅಂಥ ಮಹನೀಯರು ಕನ್ನಡ ಜಾರಿ ವಿಷಯದಲ್ಲಿ ಕಂಡ ಪ್ರಗತಿ ಏನು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎನ್ನುವುದು ಚಿಂತಕರ ಅಭಿಪ್ರಾಯ.

ವಿಶೇಷವಾಗಿ ಅಂಗಡಿಗಳ ನಾಮಫಲಕ ಕನ್ನಡದಲ್ಲಿ ಬರೆಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಚನೆ ನೀಡಿರುವುದು ಹೊರತುಪಡಿಸಿದರೆ ಪ್ರಗತಿ ದೃಷ್ಟಿಯಿಂದ ಇವರು ಮಾಡಿರುವ ಸಾಧನೆ ಶೂನ್ಯ. ಕನ್ನಡ ನಾಮಫಲಕ ಅಳವಡಿಕೆ ಕುರಿತು ವ್ಯಾಪಾರಿಗಳ ಮನ ಒಲಿಸಬೇಕು. ದೀಪಾವಳಿ ಹಬ್ಬಕ್ಕೂ ಮುನ್ನ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಬೇಕು. ಅದಕ್ಕೂ ಬಗೆಹರಿಯದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಅಂದಾಗ ಮಾತ್ರ ಮಾರುಕಟ್ಟೆ ಪ್ರದೇಶ ಕನ್ನಡಮಯ ಆಗುವುದಕ್ಕೆ ಸಾಧ್ಯ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ನಾಡು- ನುಡಿ ಬಗೆಗಿನ ಅಭಿಮಾನ ನವೆಂಬರ್‌ಗೆ ಮಾತ್ರ ಸೀಮಿತಗೊಳ್ಳುವುದು ತರವಲ್ಲ. ಅದು ಈ ಭೂಮಿಯಲ್ಲಿ ಪ್ರತಿಯೊಬ್ಬರ ಉಸಿರಾಗಬೇಕು ಅಂದಾಗ ಮಾತ್ರ ಈ ಭೂಮಿಯಲ್ಲಿ ನೆಲೆಸಿದ್ದಕ್ಕೂ ಸಾರ್ಥಕ ಆಗುತ್ತದೆ ಎನ್ನುವುದು ಅಪ್ಪಟ ಕನ್ನಡಿಗಳ ಅಂಬೋಣ. ಹಾಗೆಂದು ಈ ಜವಾಬ್ದಾರಿ ಕೇವಲ ಅಧಿಕಾರಿಗಳಿಗೆ ಮಾತ್ರ ಸೀಮಿತವೆಂದೇನಲ್ಲ.
 
ಕನ್ನಡಪರ ಸಂಘಟನೆಗಳು ಈ ನಿಟ್ಟಿನಲ್ಲಿ ಸ್ವ ಇಚ್ಛೆಯಿಂದ ಸಹಕರಿಸಲು ಮುಂದಾಗಬೇಕು. ಅನಿವಾರ್ಯವಾದರೆ ಹೋರಾಟಕ್ಕೂ ಹಿಂದೇಟು ಹಾಕಬಾರದು ಎನ್ನುತ್ತಾರೆ ಕನ್ನಡ ಸಂಘದ ಅಧ್ಯಕ್ಷ ಶಶಿಕಾಂತ ಯಲಾಲ್, ಭಾರತೀಯ ಬೌದ್ಧ ಮಹಾಸಭಾ ಉಪಾಧ್ಯಕ್ಷ ಧರ್ಮರಾಯ್ ಘಾಂಗ್ರೆ. ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಪುತ್ರ ಮಾಳಗೆ ಇನ್ನೂ ವಿವಿಧ ಸಂಘಟನೆಗಳ ಮುಖಂಡರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.