ADVERTISEMENT

ಉದ್ಯೋಗ ಖಾತರಿ ಸಮರ್ಪಕ ಜಾರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಬೀದರ್: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವಂತೆ ಸಂಸತ್ ಸದಸ್ಯ ಎನ್.ಧರ್ಮ ಸಿಂಗ್ ಶುಕ್ರವಾರ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೇಂದ್ರ ಸರ್ಕಾರದ ಯೋಜನೆಗಳ ಕುರಿತ ಜಿಲ್ಲಾ ಜಾಗೃತಿ ಮತ್ತು ಅನುಷ್ಠಾನ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಳ್ಳೆಯ ಉದ್ದೇಶದಿಂದ ಕೇಂದ್ರ ಸರ್ಕಾರವು ಉದ್ಯೋಗ ಖಾತರಿ ಯೋಜನೆಗಾಗಿ ಅಪಾರ ಪ್ರಮಾಣದ ಹಣ ಬಿಡುಗಡೆ ಮಾಡುತ್ತಿದೆ. ಹಿಂದೆ ಯಾವಾಗಲೂ ಇಷ್ಟೊಂದು ಪ್ರಮಾಣದ ಹಣ ಬಂದಿರಲಿಲ್ಲ. ಅದನ್ನು ಸದುಪಯೋಗ ಪಡಿಸಿಕೊಳ್ಳದಿದ್ದರೆ ಹೇಗೆ? ಎಂದು ಅವರು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಉದ್ಯೋಗ ಖಾತರಿ ಯೋಜನೆಗಾಗಿ ಸುಮಾರು 200 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಅಷ್ಟು ಹಣ ಸಮರ್ಪಕವಾಗಿ ಬಳಕೆ ಆಗಿದ್ದರೆ ಎಲ್ಲರೂ ಆರಾಮ ಇರಬೇಕಿತ್ತು. ಬಿಡುಗಡೆ ಮಾಡಿದ ಹಣವನ್ನೇ ಖರ್ಚು ಮಾಡದೆ ಮತ್ತೆ ಹಣ ಕೇಳಿದರೆ ಹೇಗೆ ನೀಡುತ್ತಾರೆ? ಎಂದು ಕೇಳಿದರು.

ಉದ್ಯೋಗ ಖಾತರಿ ಯೋಜನೆಯು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಭಿನ್ನಾಭಿಪ್ರಾಯ, ಜಗಳಕ್ಕೆ ಕಾರಣ ಆಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ ಕೇಳಿದರು. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಂಸದರು `ನಿಮ್ಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ್ ನಡುವೆ ಏನೂ ಆಗಿಲ್ಲ. ಅಲ್ಲ?~ ಎಂದು ಚಟಾಕಿ ಹಾರಿಸಿದರು.

`ಉದ್ಯೋಗ ಖಾತರಿ ಯೋಜನೆಯ ನಿತ್ಯದ ಚಟುವಟಿಕೆಗಳನ್ನು ಸರಿಯಾಗಿ ದಾಖಲಿಸುವ ವ್ಯವಸ್ಥೆ ಇಲ್ಲ~ ಎಂದು ಆಕ್ಷೇಪಿಸಿದ ಶಾಸಕ ಈಶ್ವರ ಖಂಡ್ರೆ ಅವರು `ಯೋಜನೆಯ ಬಗ್ಗೆ ಇತ್ತೀಚಿನ ಮಾಹಿತಿ ಜಿಲ್ಲಾ ಪಂಚಾಯಿತಿ ಬಳಿ ಇಲ್ಲ. ದಾಖಲೆ ಇಲ್ಲ ಎಂದರೆ ಹೇಗೆ ದಾಖಲಿಸುತ್ತೀರಿ?~ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.