ADVERTISEMENT

ಎಂಜಿನಿಯರ್ ಮೇಲೆ ಹಲ್ಲೆ: ಬಂಧನ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 7:05 IST
Last Updated 6 ಏಪ್ರಿಲ್ 2011, 7:05 IST
ಎಂಜಿನಿಯರ್ ಮೇಲೆ ಹಲ್ಲೆ: ಬಂಧನ
ಎಂಜಿನಿಯರ್ ಮೇಲೆ ಹಲ್ಲೆ: ಬಂಧನ   

ಬೀದರ್: ರಸ್ತೆ ತೆರವು ಸಂದರ್ಭದಲ್ಲಿ ನಾಗರಿಕರು ನಗರಸಭೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.ನಗರದ ಹಳ್ಳದಕೇರಿಯಿಂದ ಕುಂಬಾರವಾಡ ಕ್ರಾಸ್‌ವರೆಗಿನ ರಸ್ತೆಯಲ್ಲಿ ಈಗಾಗಲೇ ಮಾರ್ಕೌಟ್ ಮಾಡಲಾಗಿದೆ. ಅಗಲೀಕರಣಕ್ಕೆ ಎರಡೂ ಕಡೆ ತಲಾ 33 ಅಡಿ ಸ್ಥಳ ಗುರುತಿಸಲಾಗಿದೆ. ಈ ಮಧ್ಯೆ ಮಂಗಳವಾರ ಕಟ್ಟಡ ಕೆಡಹಲು ಮುಂದಾದ ವೇಳೆ ಘಟನೆ ಜರುಗಿದೆ.

ಎರಡು ಕಡೆ ಸಮಾನವಾಗಿ ಗುರುತು ಹಾಕಲಾಗಿದ್ದರೂ ಮನಬಂದಂತೆ ತೆರವು ಮಾಡಲಾಗುತ್ತಿದೆ. ಒಂದು ಕಡೆ ಹೆಚ್ಚು, ಇನ್ನೊಂದು ಕಡೆ ಕಡಿಮೆ ತೆರವು ಮಾಡಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ನಾಗರಿಕರು ಆಪಾದಿಸಿದರು.ಈ ಕುರಿತು ನಗರಸಭೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಲಕ್ಷ್ಮಣರಾವ ಜೊತೆಗೆ ಮಾತಿನ ಚಕಮಕಿ ನಡೆಸಿದರು. ನಂತರ ಅದು ವಿಕೋಪಕ್ಕೆ ತಿರುಗಿ ಹಲ್ಲೆ ನಡೆಸುವ ಹಂತಕ್ಕೂ ಹೋಯಿತು. ಹೀಗಾಗಿ ಕೆಲ ಹೊತ್ತು ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

ನಂತರ ಸಹಾಯಕ ಆಯುಕ್ತರಾದ ಖುಷ್ಬು ಗೋಯಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮರ್ತೂರಕರ್, ನಗರಸಭೆಯ ಆಯುಕ್ತ ಎಸ್.ಪಿ. ಮುಧೋಳ್ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಎ.ಇ.ಇ. ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ ಎಂದು ಅಧಿಕಾರಿಗಳೆದುರು ಸ್ಪಷ್ಟಪಡಿಸಿದರು. ನಂತರ ಪೊಲೀಸ್ ಬಂದೋಬಸ್ತ್‌ನಲ್ಲಿ ರಸ್ತೆ ತೆರವು ಕಾರ್ಯಾಚರಣೆ ಮುಂದುವರೆಸಲಾಯಿತು.ತಮ್ಮ ಮೇಲೆ ಹಲ್ಲೆ ನಡೆಸಿ ಕರ್ತವಕ್ಕೆ ಅಡ್ಡಿಪಡಿಸಲಾಗಿದೆ ಎಂದು ಎ.ಇ.ಇ. ಲಕ್ಷ್ಮಣರಾವ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಕುಮಾರ, ಸೂರ್ಯಕಾಂತ, ಶಿವಶಂಕರ ಹಾಗೂ ಜಗನ್ನಾಥ ಎಂಬುವರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.