ADVERTISEMENT

ಕಲ್ಯಾಣ ಪರ್ವದಲ್ಲಿ ಪಾಲ್ಗೊಳ್ಳಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 8:25 IST
Last Updated 20 ಸೆಪ್ಟೆಂಬರ್ 2011, 8:25 IST
ಕಲ್ಯಾಣ ಪರ್ವದಲ್ಲಿ ಪಾಲ್ಗೊಳ್ಳಿ
ಕಲ್ಯಾಣ ಪರ್ವದಲ್ಲಿ ಪಾಲ್ಗೊಳ್ಳಿ   

ಬೀದರ್: ಯಾವುದೇ ಜಾತಿ, ಮತ, ಪಂಥಗಳ ಭೇದ ಭಾವ ಇಲ್ಲದೆ ಬಸವಾಭಿಮಾನಿಗಳು ಹಾಗೂ ಸಾರ್ವಜನಿಕರು ಅಕ್ಟೋಬರ್ 9 ರಿಂದ ಮೂರು ದಿನಗಳ ಕಾಲ ಬಸವಕಲ್ಯಾಣದಲ್ಲಿ ನಡೆಯಲಿರುವ `ಕಲ್ಯಾಣ ಪರ್ವ~ದಲ್ಲಿ ಪಾಲ್ಗೊಳ್ಳಬೇಕು ಎಂದು ಬೆಂಗಳೂರಿನ ಕುಂಬಳಗೋಡದ ಚನ್ನಬಸವೇಶ್ವರ ಜ್ಞಾನಪೀಠದ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ಕಲ್ಯಾಣ ಪರ್ವದ ಪ್ರಚಾರಾರ್ಥವಾಗಿ ಬೀದರ್ ತಾಲ್ಲೂಕಿನ ಸಿರ್ಸಿ (ಎ) ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಸವತತ್ವ ಹಾಗೂ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡುವುದಕ್ಕಾಗಿ ಪ್ರತಿ ವರ್ಷ ಕಲ್ಯಾಣ ಪರ್ವ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಮಾತೆ ಮಹಾದೇವಿಯವರ ನೇತೃತ್ವದಲ್ಲಿ ವಿವಿಧ ಗೋಷ್ಠಿಗಳು ಜರುಗಲಿವೆ. ಕರ್ನಾಟಕ ಮಾತ್ರಲ್ಲದೆ, ವಿವಿಧ ರಾಜ್ಯಗಳ ಬಸವ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ 108 ಅಡಿ ಎತ್ತರದ ಬಸವೇಶ್ವರರ ಪುತ್ಥಳಿ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಮಾತಾಜಿ ಅವರ ಮುಂದಾಳತ್ವದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಬಸವಧರ್ಮ ಇಂದು ವಿಶ್ವದಾದ್ಯಂತ ಬೆಳೆಯಬೇಕಿತ್ತು. ಆದರೆ, ವಿರಕ್ತ ಮಠಗಳ ಸ್ವಾರ್ಥದಿಂದಾಗಿ ನಿರೀಕ್ಷಿತ ಪ್ರಚಾರ ಆಗಿಲ್ಲ ಎಂದು ಪ್ರಮುಖರಾದ ಅಣ್ಣೆಪ್ಪ ರೊಡ್ಡಾ ಅಭಿಪ್ರಾಯಪಟ್ಟರು.

ವಚನ ಸಾಹಿತ್ಯ ನೈತಿಕ ಸಾಹಿತ್ಯವಾಗಿದೆ ಎಂದು ಮನ್ನಳ್ಳಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಮಂಜುಳಾ ಹೇಳಿದರು.

ನಾಮ ಬೇರೆ ಬೇರೆ ಆಗಿದ್ದರೂ ದೇವರು ಒಬ್ಬನೇ ಆಗಿದ್ದಾನೆ. ಆದ್ದರಿಂದ ಸೃಷ್ಟಿಕರ್ತ ಲಿಂಗದೇವರನ್ನು ಎಲ್ಲರು ಪೂಜಿಸಬೇಕು. ಲಿಂಗ ಧರಿಸಿದವರು ಕಡ್ಡಾಯವಾಗಿ ಮದ್ಯಪಾನ ಮತ್ತು ಧೂಮಪಾನದಿಂದ ದೂರ ಇರಬೇಕು ಎಂದು ಸಲಹೆ ಮಾಡಿದರು.

ಬಸವಣ್ಣನವರ ವಚನಗಳಲ್ಲಿ ಸರ್ವ ಸಮಸ್ಯೆಗಳಿಗೂ ಪರಿಹಾರ ಇದೆ ಎಂದು ಪ್ರಮುಖರಾದ ಸುರೇಶ ಸ್ವಾಮಿ ನುಡಿದರು.

ಪ್ರಮುಖರಾದ ಬಸವರಾಜ ಸಂಗಮದ, ರವಿಕಾಂತ ಬಿರಾದಾರ ಉಪಸ್ಥಿತರಿದ್ದರು. ಬಕ್ಕಪ್ಪ ಶೇರಿಕಾರ ಧ್ವಜಾರೋಹಣ ಮಾಡಿದರು. ಬಸವಕುಮಾರ ಚಟ್ನಳ್ಳಿ ವಚನ ಗಾಯನ ಪ್ರಸ್ತುತಪಡಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.