ADVERTISEMENT

ಕಾಂಗ್ರೆಸ್ ಸೋಲಿಗೆ ಧರಂ, ಖಂಡ್ರೆ ಹೊಣೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2011, 10:20 IST
Last Updated 6 ಜನವರಿ 2011, 10:20 IST

ಹುಮನಾಬಾದ್: ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸುವುದಕ್ಕೆ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಖಂಡ್ರೆ ನೇರ ಹೊಣೆಗಾರರು ಎಂದು ಶಾಸಕ ರಾಜಶೇಖರ ಪಾಟೀಲ ಆರೋಪಿಸಿದರು.ಮಂಗಳವಾರ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಫಲಿತಾಂಶ ಪ್ರಕಟಗೊಂಡ ನಂತರ ನಡೆದ ಸಂಭ್ರಮಾಚರಣೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಲ್ಲೂಕಿನ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ಗೆಲುವು ಸಾಧಿಸಿದ ಸಂದೇಶ ರಾಜ್ಯದ ರಾಜಧಾನಿ ಬೆಂಗಳೂರು ಮಾತ್ರ ಅಲ್ಲ, ದೆಹಲಿಗೂ ತಲುಪಿದೆ ಎಂದರು. ‘ನಮ್ಮ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ದೊರಕದಂತೆ ಕೆಲ ವ್ಯಕ್ತಿಗಳು  ಏನೆಲ್ಲಾ ಕುತಂತ್ರ ಮಾಡಿರುವ ವಿಷಯ ಈಗ ಹಳೆಯದು. ಅದಕ್ಕೆ ಹೆದರದೆ ನನ್ನ ಅಭಿಮಾನಿಗಳನ್ನು ನಾನು ಪಕ್ಷೇತರ ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸಿದರೂ, ವಿಚಲಿತರಾಗದೇ ಕ್ಷೇತ್ರದಲ್ಲಿ ನಾನು ಕೈಗೊಂಡ ಅಭಿವೃದ್ಧಿ ಕಾರ್ಯ ಹಾಗೂ ಸೇವಾ ಮನೋಭಾವಕ್ಕೆ ಮನಸೋತು ಪಕ್ಷೇತರ ಅಭ್ಯರ್ಥಿಗಳನ್ನು ಗೆಲ್ಲಿಸಿದ ಕ್ಷೇತ್ರದ ಸಮಸ್ತ ಮತದಾರರು ಮತ್ತು ಅಭಿಮಾನಿಗಳ ನಿಸ್ವಾರ್ಥ ಪ್ರೇಮಕ್ಕೆ ಉಸಿರಿರುವ ತನಕ ಋಣಿಯಾಗಿ ಇರುತ್ತೇನೆ’ ಎಂದರು.

‘ತಾಲ್ಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಪಾಟೀಲ, ನಗರ ಕಾಂಗ್ರೆಸ್ ಅಧ್ಯಕ್ಷ ಅಪ್ಸರಮಿಯ್ಯ ಮತ್ತು  ಇನ್ನೂ ಅನೇಕರು ನೀಡಿದ ಸಹಯೋಗದೊಂದಿಗೆ ಈ ಕ್ಷೇತ್ರವನ್ನು ಪ್ರತಿನಿಧಿಸುವ ನಾನು ಅತ್ಯಂತ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಮತದಾರರನ್ನು ಸಂಪರ್ಕಿಸಿ, ಮತಯಾಚನೆ ಮಾಡಿದ್ದರ ಪ್ರತೀಕ ತಾಲ್ಲೂಕಿನಲ್ಲಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವುದು ಸಾಮಾನ್ಯ ವಿಷಯ ಅಲ್ಲ’ ಎಂದು ವಿವರಿಸಿದರು.

ನೂತನವಾಗಿ ಆಯ್ಕೆಗೊಂಡ ಪಕ್ಷೇತರ ಸದಸ್ಯರಾದ ವೀರಣ್ಣ ಪಾಟೀಲ, ಮಹಾಂತಯ್ಯ ತೀರ್ಥ, ಚಂದ್ರಮ್ಮ ಗಂಗಶೆಟ್ಟಿ ತಾಲ್ಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಪಾಟೀಲ, ಅಪ್ಸರಮಿಯ್ಯ, ಪ್ರಮುಖರಾದ ಶಿವಕುಮಾರ ತೀರ್ಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.