ADVERTISEMENT

ಕೃಷಿ ಅಧಿಕಾರಿಯಿಂದ ಸಾವಯವ ಕೃಷಿಗೆ ಅಪಸ್ವರ!

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 7:05 IST
Last Updated 4 ಜೂನ್ 2011, 7:05 IST

ಔರಾದ್: ಈಚಿನ ವರ್ಷಗಳಲ್ಲಿ ಸಾವಯವ ಕೃಷಿ ಬಗ್ಗೆ ಸಾಕಷ್ಟು ಮಹತ್ವ, ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಇಲ್ಲಿಯ ಕೃಷಿ ಅಧಿಕಾರಿಯೊಬ್ಬರು ಈ ಬಗ್ಗೆ ಅಪಸ್ವರ ಎತ್ತಿದ್ದಾರೆ.

ತಾಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಚರ್ಚೆ ವೇಳೆ ಸಹಾಯಕ ಕೃಷಿ ನಿರ್ದೇಶಕ ಹೈಬತ್ತಿ ಅವರು ಈ ಕುರಿತು ಅಪಸ್ವರ ಎತ್ತಿದ್ದಾರೆ. ಕ್ರಿಮಿನಾಶಕ ಮತ್ತು ರಸಗೊಬ್ಬರ ಬಳಸದೆ ಬೆಳೆ ಬೆಳೆಸಲು ಸಾಧ್ಯವಿಲ್ಲ. ಸಾವಯವ ಕೃಷಿಯಿಂದ ಉತ್ತಮ ಇಳುವರಿ ಬರುತ್ತದೆ ಎಂಬುದು ಕೇವಲ ಭ್ರಮೆ. ಯಾರಿಗಾದರೂ ಅದರ ಬಗ್ಗೆ ಭರವಸೆ ಇದ್ದರೆ ನನ್ನ 10 ಎಕರೆ ಜಮೀನಿನಲ್ಲಿ ಬೆಳೆಸಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ಇವರ ಹೇಳಿಕೆಯಿಂದ ಸಭೆಯಲ್ಲಿದ್ದ ಎಲ್ಲರಿಗೂ ಅಚ್ಚರಿ ಮೂಡಿತು. ಸಾವಯವ ಕೃಷಿ ಕೇವಲ ಭ್ರಮೆ ಎಂದಾದರೆ ಸರ್ಕಾರ ಅದಕ್ಕೆ ಅಷ್ಟೊಂದು ಮಹತ್ವ ಏಕೆ ಕೊಡುತ್ತಿತ್ತು ಎಂದು ತಾಪಂ. ಮುಖ್ಯಾಧಿಕಾರಿ ಪ್ರೇಮಸಿಂಗ್ ರಾಠೋಡ ವಿಷಯಕ್ಕೆ ತೆರೆ ಎಳೆದರು.

ಸಾವಯವ ಕೃಷಿಗೆ ಉತ್ತೇಜಿಸಲು ಸರ್ಕಾರ ಹತ್ತಾರು ಕಾರ್ಯಕ್ರಮಗಳು ಹಾಕಿಕೊಂಡು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿರುವ ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಯ ಹೇಳಿಕೆ ಚರ್ಚೆಗೆ ಗ್ರಾಸ ಒದಗಿಸಿದೆ. ತಾಪಂ. ಅಧ್ಯಕ್ಷ ಶ್ರೀರಂಗ ಪರಿಹಾರ, ಉಪಾಧ್ಯಕ್ಷೆ ಜೈಶ್ರೀ ಘಾಟೆ, ಸದಸ್ಯರು, ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.