ADVERTISEMENT

ಕೃಷಿ ಸಾಲ: ಡಿಸಿಸಿ ಬ್ಯಾಂಕ್ ಪಾಲು ಶೇ 65

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 6:48 IST
Last Updated 21 ನವೆಂಬರ್ 2017, 6:48 IST

ಬೀದರ್: ‘ಜಿಲ್ಲೆಯಲ್ಲಿ ರೈತರಿಗೆ ನೀಡುವ ಕೃಷಿ ಸಾಲದಲ್ಲಿ ಡಿಸಿಸಿ ಬ್ಯಾಂಕ್ ಪಾಲು ಶೇಕಡ 65 ರಷ್ಟು ಇದೆ’ ಎಂದು ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಹತ್ತಿ ತಿಳಿಸಿದರು.

ನಬಾರ್ಡ್ ವತಿಯಿಂದ ಬೀದರ್, ವಿಜಯಪುರ ಹಾಗೂ ಬಾಗಲಕೋಟೆ ಡಿಸಿಸಿ ಬ್ಯಾಂಕ್‌ಗಳ ಮಹಿಳಾ ಪ್ರಬಂಧಕರಿಗೆ ಇಲ್ಲಿನ ಸೌಹಾರ್ದ ರುಡ್‌ಸೆಟ್‌ಲ್ಲಿ ಆಯೋಜಿಸಿದ್ದ ಕಚೇರಿ ವ್ಯವಸ್ಥಾಪನೆ ಹಾಗೂ ಮಹಿಳಾ ಅಭಿವೃದ್ಧಿ ಕುರಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದಲ್ಲೇ ರೈತರಿಗೆ ಅತಿಹೆಚ್ಚು ಸಾಲ ಕೊಡುವ ಬ್ಯಾಂಕ್ ಆಗಿದೆ. ಸಹಕಾರ ಬ್ಯಾಂಕ್‌ಗಳಿಗೆ ರೈತರೇ ಬೆನ್ನೆಲುಬು ಆಗಿದ್ದಾರೆ’ ಎಂದು ಹೇಳಿದರು. ‘ರೈತರಿಗೆ ಸಾಲ ನೀಡುವುದಷ್ಟೇ ಅಲ್ಲ, ಅವರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನೂ ಮಾಡಬೇಕಿದೆ. ತರಬೇತಿಗಳು ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಕಲಿಸಿಕೊಡುತ್ತವೆ’ ಎಂದು ತಿಳಿಸಿದರು.

ADVERTISEMENT

‘ಬ್ಯಾಂಕ್‌ಗಳ ಸಿಬ್ಬಂದಿ ನೇಮಕಾತಿಯಲ್ಲಿ ಮಹಿಳೆಯರಿಗೂ ಆದ್ಯತೆ ದೊರೆಯುತ್ತಿದೆ. ಕೇವಲ ಕಚೇರಿಯಲ್ಲೇ ಕುಳಿತು ಕೆಲಸ ಮಾಡುವ ಬ್ಯಾಂಕಿಂಗ್ ವ್ಯವಸ್ಥೆ ಬದಲಾಗಬೇಕಿದೆ. ಬದಲಾದ ವಾತಾವರಣದಲ್ಲಿ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕಿದೆ’ ಎಂದು ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರವೀಕ್ಷಕಿ ಗೀತಾ, ಕಚೇರಿಗಳಲ್ಲಿ ಮಹಿಳಾ ದೌರ್ಜನ್ಯ ತಡೆ ಸಮಿತಿ ರಚನೆ ಕುರಿತು ಉಪನ್ಯಾಸ ನೀಡಿದರು.

ವಿಜಯಪುರ ಡಿಸಿಸಿ ಬ್ಯಾಂಕ್‌ ಗಣಕಯಂತ್ರ ವಿಭಾಗದ ಮುಖ್ಯಸ್ಥೆ ಸೌಜನ್ಯ ಲಿಂಗಾದಲ್ಲಿ, ಶಿಲ್ಪಾ ಜಮಾದಾರ್‌, ಭಾಗ್ಯಶ್ರೀ ಪಾಟೀಲ, ನಬಾರ್ಡ್ ಬ್ಯಾಂಕ್‌ನ ಡಿ.ವಿ.ಎಸ್. ಜೋಶಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಂಡಿತ ಹೊಸಳ್ಳಿ, ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಮಹಾಜನ ಮಲ್ಲಿಕಾರ್ಜುನ, ಉಪ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ, ರಾಜಕುಮಾರ ಉಪಸ್ಥಿತರಿದ್ದರು. ಅನಿಲ ಪರಶೆಣ್ಣೆ, ತನ್ವೀರ್ ರಜಾ ಮತ್ತು ನಾಗಶೆಟ್ಟಿ ಘೋಡಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಎಸ್.ಜಿ. ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.