ADVERTISEMENT

ಚರ್ಚಿಸಿ ಸಮಸ್ಯೆ ಪರಿಹರಿಸಲಿ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 6:47 IST
Last Updated 20 ಸೆಪ್ಟೆಂಬರ್ 2013, 6:47 IST

ಬೀದರ್: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ತಕ್ಷಣ ಹಣ ಪಾವತಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಆಗ್ರಹಿಸಿದರು.

ಕಬ್ಬು ಸಾಗಿಸಿದ 15 ದಿನಗಳ ಒಳಗೆ ಹಣ ಸಂದಾಯ ಮಾಡಬೇಕು ಎಂಬ ನಿಯಮ ಇದೆ. ಆದರೆ, ಐದು–-ಆರು ತಿಂಗಳು ಕಳೆದರೂ ಪಾವತಿ ಆಗಿಲ್ಲ. ರೂ. 23.50 ಕೋಟಿ ಬಾಕಿ ಉಳಿದಿದೆ ಎಂದು ಕಾರ್ಖಾನೆ ಮಾಜಿ ಅಧ್ಯಕ್ಷರೂ ಆದ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿಷಾದಿಸಿದರು.

ಡಿಸಿಸಿ ಬ್ಯಾಂಕ್, ಕಾರ್ಖಾನೆ ನಡುವೆ ಅವಿನಾಭಾವ ಸಂಬಂಧ ಇದೆ. ಅಂತೆಯೇ ಪರಸ್ಪರ ಸಹಾಯವು ಆಗಿದೆ. ಹೀಗಾಗಿ ಸ್ವ ಪ್ರತಿಷ್ಠೆ ಬಿಟ್ಟು, ಕಾರ್ಖಾನೆ ಮತ್ತು ಬ್ಯಾಂಕ್ ಆಡಳಿತ ಮಂಡಳಿ ಪರಸ್ಪರ ಚರ್ಚಿಸಿ ಸದ್ಯದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ರೈತರ ಬಾಕಿ ಪಾವತಿಸಿ ಮುಂದಿನ ಹಂಗಾಮಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಆಡಳಿತ ಮಂಡಳಿ ಮುಂದಾಗಬೇಕು ಎಂದು ಹೇಳಿದರು. 20 ಸಾವಿರ ರೈತರು, 800 ಸಿಬ್ಬಂದಿ ಹಾಗೂ 4 ಸಾವಿರ ಕೂಲಿ ಕಾರ್ಮಿಕರು ಕಾರ್ಖಾನೆ ಅವಲಂಬಿಸಿದ್ದು, ಕಾರ್ಖಾನೆ ಹಾಳಾದರೆ 25 ಸಾವಿರ ಕುಟುಂಬಗಳಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಕಾರ್ಖಾನೆ ಉಳಿವು ಅಗತ್ಯ ಎಂದು ಪ್ರತಿಪಾದಿಸಿದರು. 
ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆ ಆಗಿದ್ದರಿಂದ ಕಳೆದ ವರ್ಷಕ್ಕಿಂತಲೂ 4-–5 ಲಕ್ಷ ಟನ್ ಹೆಚ್ಚು ಕಬ್ಬು ಇಳುವರಿ ಬರುವ ಸಾಧ್ಯತೆ ಇದೆ.

ಒಟ್ಟು 15 ಲಕ್ಷ ಟನ್ ಕಬ್ಬು ಅರೆಯಬೇಕಾಗಬಹುದು. ಎರಡು ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಖಂಡಸಾರಿಗಳು 12-–13 ಲಕ್ಷ ಟನ್ ಕಬ್ಬು ನುರಿಸಬಹುದಾಗಿದ್ದು, ಇನ್ನುಳಿದ ಕಬ್ಬು ನುರಿಸಲು ಸಮಸ್ಯೆ ಆಗಬಹುದು ಎಂದು ಹೇಳಿದರು.

‘ಬೆಳೆ ಹಾನಿಗೆ ಪರಿಹಾರ ಕೊಡಿ’: ಅತಿವೃಷ್ಠಿಯಿಂದ ಜಿಲ್ಲೆಯಲ್ಲಿ ಆಗಿರುವ ಬೆಳೆ ಹಾನಿಗೆ ಪರಿಹಾರ ಒದಗಿಸಬೇಕು ಎಂದು ಖಂಡ್ರೆ ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು ಈ ಸಂಬಂಧ ಕಂದಾಯ ಇಲಾಖೆಯಿಂದ ವರದಿ ತರಿಸಿಕೊಂಡು ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಾಜಿ ಅರ್ಷದ್ ಅಲಿ, ಪ್ರಧಾನ ಕಾರ್ಯದರ್ಶಿ ಅರವಿಂದಕುಮಾರ್ ಅರಳಿ, ರಾಜಶೇಖರ್ ಪಾಟೀಲ್ ಅಷ್ಟೂರು, ಬಿ.ಎಸ್.ಎಸ್.ಕೆ. ಮಾಜಿ ಉಪಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.