ಬೀದರ್: ಒಂದೂವರೆ ತಿಂಗಳ ಅವಧಿಯಲ್ಲೇ ನಗರದ ಹೊರವಲಯದಲ್ಲಿ ಇರುವ ಚಿದ್ರಿಯ ಬುತ್ತಿ ಬಸವಣ್ಣ ದೇವಸ್ಥಾನದಲ್ಲಿ ಎರಡನೇ ಬಾರಿಗೆ ಕಳ್ಳತನ ನಡೆದಿದೆ.
ಮಂಗಳವಾರ ರಾತ್ರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಬೀಗ ಮುರಿದು ವಿವಿಧ ಸಾಮಗ್ರಿ ಹಾಗೂ ಗಲ್ಲಾ ಪೆಟ್ಟಿಗೆಯಲ್ಲಿದ್ದ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಕಳ್ಳರು ಗರ್ಭಗುಡಿ, ಕಚೇರಿ, ಗೋದಾಮು, ಅಡುಗೆ ಕೋಣೆ ಸೇರಿ ನಾಲ್ಕು ಕೋಣೆ, ಅಲ್ಮೇರಾ ಹಾಗೂ ಹುಂಡಿಯ ಬೀಗ ಮುರಿದಿದ್ದು, ಮೈಕ್ಸೆಟ್ಗೆ ಸಂಬಂಧಿಸಿದ ಉಪಕರಣ 15 ಹಿತ್ತಾಳೆ ಗಂಟೆ, ಪೂಜಾ ಸಾಮಗ್ರಿ, ಗಲ್ಲಾ ಪೆಟ್ಟಿಗೆಯಲ್ಲಿದ್ದ ಹಣ ಸೇರಿದಂತೆ ಸುಮಾರು 80 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಈ ಬಗೆಗೆ ದೂರು ಸಲ್ಲಿಸಲಾಗುವುದು ಎಂದು ಬುತ್ತಿ ಬಸವಣ್ಣ ದೇವಾಲಯ ಟ್ರಸ್ಟ್ ಅಧ್ಯಕ್ಷ ರಮೇಶ್ ಮಾಶೆಟ್ಟಿ ಚಿದ್ರಿ ತಿಳಿಸಿದ್ದಾರೆ.
ಕಳೆದ ಮೇ 19 ರಂದು ಸಹ ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು. ಆಗ ಹುಂಡಿ ಒಡೆದು ಒಳಗಿದ್ದ ಹಣ ದೋಚಲಾಗಿತ್ತು ಎಂದು ಹೇಳಿದ್ದಾರೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಗಾಂಧಿಗಂಜ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನ ದಳದೊಂದಿಗೆ ದೇವಸ್ಥಾನದ ಪರಿಸರದಲ್ಲಿ ತಪಾಸಣೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.