ADVERTISEMENT

ನಿಯೋಜಿತ ಶಿಕ್ಷಕರ ಮುಂದುವರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 6:45 IST
Last Updated 2 ಜೂನ್ 2011, 6:45 IST

ಔರಾದ್: ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಕಳೆದ ವರ್ಷ ನಿಯೋಜಿಸಲಾದ ಶಿಕ್ಷಕರ ಸೇವೆ ಮುಂದುವರಿಸುವಂತೆ ಭಾರತ ವಿದ್ಯಾರ್ಥಿ ಒಕ್ಕೂಟ ಆಗ್ರಹಿಸಿದೆ.

ಒಕ್ಕೂಟದ ಪ್ರಮುಖ ಶಿವಕುಮಾರ ಕಾಂಬಳೆ, ಅವಿನಾಶ ಡೊಂಗರೆ, ಅಂಬಾದಾಸ ಪಾಟೀಲ, ಪವಾರ ನಾಯಕ, ಸುಧಾಕರ ಮೊಕ್ತೆದಾರ, ಜ್ಞಾನೇಶ್ವರ ಮಂಗಳವಾರ ತಹಸೀಲ್ದಾರ್ ಶಿವಕುಮಾರ ಶೀಲವಂತ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.

ಎರಡು ವರ್ಷದ ಹಿಂದೆ ಇಲ್ಲಿ ಹೊಸದಾಗಿ ಆರಂಭವಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕರ ಕೊರತೆ ಸೇರಿದಂತೆ  ವಿವಿಧ ಮೂಲ ಸೌಲಭ್ಯ ಕೊರತೆಯಿಂದ ನರಳುತ್ತಿದೆ. ವಿದ್ಯಾರ್ಥಿಗಳ ಹೋರಾಟದ ಫಲವಾಗಿ ಸರ್ಕಾರ ಈ ಕಾಲೇಜಿಗೆ ಕೆಲ ಶಿಕ್ಷಕರನ್ನು ನಿಯೋಜನೆ ಮಾಡಿದೆ. ಆದರೆ ನಿಯೋಜಿತ ಶಿಕ್ಷಕರು ಈಗ ಮತ್ತೆ ತಮ್ಮ ಮಾತೃ ಸೇವೆಗೆ ಹಿಂದಿರುಗುತ್ತಿದ್ದಾರೆ. ಇದರಿಂದಾಗಿ ಇಲ್ಲಿಯ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ನಿಯೋಜನೆಗೊಂಡ ಎಲ್ಲ ಶಿಕ್ಷಕರ ಸೇವೆ ಮುಂದುವರಿಸಬೇಕು. ವಿದ್ಯಾರ್ಥಿಗಳಿಗೆ ವಾಚನಾಲಯ ಮತ್ತು ಇತರ ಪೀಠೋಪಕರಣ ಮತ್ತು ಪಾಠೋಪಕರಣ ಸೌಲಭ್ಯ ಒದಗಿಸಬೇಕು. ಜಿಲ್ಲೆಯ ಬೇರೆ ಬೇರೆ ಕಡೆ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿರುವುದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ ಸೌಲಭ್ಯ ಒದಗಿಸಬೇಕು. ಹೊಸದಾಗಿ ಮಂಜೂರಿಯಾದ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಕಾಮಗಾರಿ ಶೀಘ್ರದಲ್ಲಿ ಆರಂಭಿಸುವಂತೆ ಬೇಡಿಕೆ ಮಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.