ಬಸವಕಲ್ಯಾಣ: ತಾಲ್ಲೂಕಿನ ನಿರ್ಗುಡಿ ಗ್ರಾಮದಲ್ಲಿ ಸಾರಾಯಿ ಮಾರಾಟ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಒತ್ತಾಯಸಿಇ ಸೋಮವಾರ ಮಹಿಳಾ ಮಂಡಳ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ಗ್ರಾಮದಲ್ಲಿ 5 ಸ್ಥಳಗಳಲ್ಲಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಪರವಾನಿಗೆ ಇಲ್ಲದಿದ್ದರೂ ಪ್ರತಿದಿನ ರಾಜಾರೋಷವಾಗಿ ಈ ದಂಧೆ ನಡೆಯುತ್ತಿದೆ.
ಈ ಕಾರಣ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಗ್ರಾಮದಲ್ಲಿ ಸಾರಾಯಿ ಸಿಗುತ್ತಿರುವ ಕಾರಣ ಬಡ ಕೂಲಿ ಕಾರ್ಮಿಕರು ಕೂಲಿ ಹಣ ಅದಕ್ಕಾಗಿಯೇ ವ್ಯಯಿಸುತ್ತಿದ್ದಾರೆ. ಈ ಕಾರಣ ಕುಟುಂಬದಲ್ಲಿ ಜಗಳಗಳು ಸಹ ಆಗುತ್ತಿವೆ. ನೆರೆಹೊರೆಯವರು ಇಂಥವರಿಗೆ ಹೆದರಬೇಕಾಗುತ್ತಿದೆ.
ಆದ್ದರಿಂದ ಇಲ್ಲಿನ ಸಾರಾಯಿ ಮಾರಾಟವನ್ನು ನಿಷೇಧಿಸಬೇಕು ಎಂದು ಸಂಬಂಧಿತರಿಗೆ ಹಲವಾರು ಸಲ ಕೇಳಿಕೊಂಡರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ.
ಆದ್ದರಿಂದ ಇನ್ನು ಮುಂದಾದರೂ ಶೀಘ್ರ ಈ ಬಗ್ಗೆ ನಿರ್ಣಯ ತೆಗೆದುಕೊಂಡು ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ವಿನಂತಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀಬಾಯಿ ಪ್ರಹ್ಲಾದ, ಉಪಾಧ್ಯಕ್ಷ ಧನರಾಜಗಿರಿ ಗೋಸ್ವಾಮಿ ಹಾಗೂ ಪ್ರಮುಖರಾದ ಬಾಲಾಜಿ ನಾರಾಯಣ, ಸುಭಾಷ ಡೋಣೆ, ಮಲ್ಲಿಕಾರ್ಜುನ ರಾಸೂರೆ, ಸಂತೋಷ ರಾಯವಾಡೆ, ಸತೀಶರೆಡ್ಡಿ ನರಹರೆ, ಬಾಲಾಜಿ ಜಾಧವ, ಶಿವಪುತ್ರ ಮೂಲಗೆ, ಮುರಳೀಧರ ಬಿರಾದಾರ, ಹಣಮಂತ ಮೂಲಗೆ, ನಾಗನಾಥ ಜಮಾದಾರ ಒಳಗೊಂಡು 50 ಕ್ಕೂ ಹೆಚ್ಚಿನ ಜನರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.