ADVERTISEMENT

ನಿರ್ಲಕ್ಷ್ಯಕ್ಕೆ ಒಳಗಾದ ಸರ್ಕಾರಿ ಕಟ್ಟಡ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 10:10 IST
Last Updated 21 ಅಕ್ಟೋಬರ್ 2011, 10:10 IST
ನಿರ್ಲಕ್ಷ್ಯಕ್ಕೆ ಒಳಗಾದ ಸರ್ಕಾರಿ ಕಟ್ಟಡ
ನಿರ್ಲಕ್ಷ್ಯಕ್ಕೆ ಒಳಗಾದ ಸರ್ಕಾರಿ ಕಟ್ಟಡ   

ಔರಾದ್: ಕೆಲ ದಶಕಗಳ ಹಿಂದೆ ತಾಲ್ಲೂಕು ಕೇಂದ್ರದ ಸ್ಥಾನಮಾನ ಹೊಂದಿರುವ ಸಂತಪುರ ಹೋಬಳಿ ಕೇಂದ್ರ ಈಗ ಉಪೇಕ್ಷೆಗೆ ಒಳಗಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.

ಸಂತಪುರ ಈಗ ತಾಲ್ಲೂಕು ಕೇಂದ್ರ ಅಲ್ಲದಿದ್ದರೂ ತಾಲ್ಲೂಕು ಕೇಂದ್ರದಲ್ಲಿರಬೇಕಾದ ಕೆಲ ಸರ್ಕಾರಿ ಕಚೇರಿಗಳು ಇಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ, ಕೈಗಾರಿಕೆ, ಮೀನುಗಾರಿಕೆ ಸೇರಿದಂತೆ ಕೆಲ ಮುಖ್ಯ ಕಚೇರಿಗಳು ಸಂತಪುರನಲ್ಲಿವೆ.
 
ಈಗಲೂ ಸಂತಪುರ ತಾಲ್ಲೂಕು ಎಂದು ಹೇಳಿಕೊಳ್ಳುವ ಅಲ್ಲಿಯ ಕೆಲ ಹಿರಿಯರು ನಮ್ಮ ಊರಿನ ಬಗ್ಗೆ ಕೆಲ ರಾಜಕಾರಣಿಗಳು ಮತ್ತು ಅಧಿಕಾರಿಗಳಲ್ಲಿ ಉಪೇಕ್ಷೆ ಮನೋಭಾವ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕು ಕೇಂದ್ರವಾದ ಔರಾದ್ ಮತ್ತು ಸಂತಪುರ ನಡುವೆ ಕೇವಲ 10 ಕಿ.ಮೀ. ಅಂತರವಿದೆ. ಸಂತಪುರನಲ್ಲಿರುವ ಸರ್ಕಾರದ ಸೌಲಭ್ಯಗಳು ಬಳಸಿಕೊಳ್ಳಲು ಅಂಥ ತೊಂದರೆ ಏನು ಆಗುವುದಿಲ್ಲ. ಆದರೆ ಸಂತಪುರ ತಾಲ್ಲೂಕು ಕೇಂದ್ರ ಇಲ್ಲ ಎಂಬ ಕಾರಣಕ್ಕೆ ಇಲ್ಲಿಯ ಸರ್ಕಾರಿ ಕಚೇರಿಗಳು ಮತ್ತು ವಸತಿ ಗೃಹಗಳು ಹಾಳು ಕೊಂಪೆಯಾಗುತ್ತಿದೆ.

ಲೋಕೋಪಯೋಗಿ ಮತ್ತು ತಾಲ್ಲೂಕು ಪಂಚಾಯ್ತಿ ಸಿಬ್ಬಂದಿ ವಸತಿಗೃಹಗಳ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ತಾಲ್ಲೂಕು ಪಂಚಾಯ್ತಿ ಕಚೇರಿ ಮತ್ತು ಪ್ರವಾಸಿ ಮಂದಿರ ಕಟ್ಟಡದ ಕಿಟಕಿ ಬಾಗಿಲುಗಳು ಮುರಿದು ಹಾಳಾಗಿವೆ. ಪಂಚಾಯ್ತಿ ಕಚೇರಿಯಲ್ಲಿನ ಲಾಕರ್ ಮುರಿದುಕೊಂಡು ಹೋದರೂ ಯಾರು ಕೇಳುವವರಿಲ್ಲವಾಗಿದೆ.
 
ಕೆಲ ಕಟ್ಟಡದ ಗೋಡೆ ಕಲ್ಲುಗಳು ಕಿತ್ತುಕೊಂಡು ಹೋಗುತ್ತಿರುವುದರಿಂದ ಇನ್ನು ಕೆಲ ವರ್ಷ ಕಳೆದರೆ ಇಲ್ಲಿ ಕಟ್ಟಡವಾಗಲಿ, ಜಾಗವಾಗಲಿ ನೋಡಲು ಸಿಗುವುದಿಲ್ಲ ಎಂದು ಇಲ್ಲಿಯ ಹಿರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

ಬೇಡಿಕೆ: ಅಳಿವಿನ ಅಂಚಿನಲ್ಲಿರುವ ಇಲ್ಲಿಯ ಸರ್ಕಾರಿ ಕಚೇರಿಗಳು ದುರಸ್ತಿ ಮಾಡಿ ಸೂಕ್ತ ನಿರ್ವಹಣೆ ಮಾಡಬೇಕು. ಸರ್ಕಾರಿ ಜಮೀನು ಒತ್ತುವರಿಯಾಗದಂತೆ ಕಂಪೌಂಡ ಗೋಡೆ ನಿರ್ಮಿಸಬೇಕು. ಹಾಳಾದ ವಸತಿಗೃಹಗಳು ದುರಸ್ತಿ ಮಾಡಿ ಸರ್ಕಾರಿ ನೌಕರರಿಗೆ ವಾಸ್ತವ್ಯಕ್ಕೆ ಅನುಕೂಲ ಒದಗಿಸಬೇಕು. ಇಲ್ಲಿಯ ಸಂತಾಜಿ ಸ್ಮಾರಕ ಜೀರ್ಣೋದ್ಧಾರ ಮಾಡುವಂತೆ ಇಲ್ಲಿಯ ನಾಗರಿಕರು ಬೇಡಿಕೆ ಮಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.