ADVERTISEMENT

ಬರಹಗಾರರಲ್ಲಿ ಹಿರಿ-ಕಿರಿಯ ಎನ್ನಬೇಡಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2011, 19:30 IST
Last Updated 21 ನವೆಂಬರ್ 2011, 19:30 IST
ಬರಹಗಾರರಲ್ಲಿ ಹಿರಿ-ಕಿರಿಯ ಎನ್ನಬೇಡಿ
ಬರಹಗಾರರಲ್ಲಿ ಹಿರಿ-ಕಿರಿಯ ಎನ್ನಬೇಡಿ   

ಬಸವಕಲ್ಯಾಣ: ಬರವಣಿಗೆ ಸತ್ವಯುತವಾಗಿದೆಯೇ ಎಂಬುದನ್ನು ನೋಡಬೇಕು. ಬರಹಗಾರರಲ್ಲಿ ಹಿರಿಯರು, ಕಿರಿಯರು ಎಂಬ ಭೇದಭಾವ ಮಾಡಬಾರದು. ಕಿರಿಯರು ಎಷ್ಟೇ ಸರಿಯಾಗಿ ಬರೆದರೂ ಸರಿ ಇಲ್ಲ ಎಂದು ತೆಗಳಬಾರದು ಎಂದು ಹುಲಸೂರ ಶಿವಾನಂದ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಹೋಬಳಿ ಕೇಂದ್ರವಾದ ನಾರಾಯಣಪುರದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡ ಪ್ರಥಮ ವಲಯ ಮಟ್ಟದ ಸಾಹಿತ್ಯ ಸಮ್ಮೇಳನದ ನೇತೃತ್ವ ವಹಿಸಿ ಮಾತನಾಡಿದರು.

ಓದಿಸಿಕೊಂಡು ಹೋಗುವ ಸಾಹಿತ್ಯ ನಿರ್ಮಿಸಬೇಕಾಗಿದೆ. ಬರಹ ಸಮಾಜದಲ್ಲಿ ಬದಲಾವಣೆ ತರಬೇಕು. ಉಪಯೋಗವಿಲ್ಲದ್ದನ್ನು ಬರೆಯುವುದರಲ್ಲಿ ಸಮಯ ಹಾಳು ಮಾಡಬಾರದು ಎಂದು ಕಿವಿಮಾತು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಹಾರಕೂಡ ಚೆನ್ನವೀರ ಶಿವಾಚಾರ್ಯರು ಮಾತನಾಡಿ ಸತ್ಯ, ಕನ್ನಡ ಮತ್ತು ಬಸವ ನಮ್ಮೆಲ್ಲರ ಷಡಕ್ಷರಿ ಮಂತ್ರವಾಗಬೇಕು. ನಾಡಿನ ಹಿರಿಮೆ ಗರಿಮೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಬಸವಕಲ್ಯಾಣ ಒಂದು ಕಾಲದಲ್ಲಿ ಸಾಹಿತ್ಯ ಮತ್ತು ಅಧ್ಯಾತ್ಮದ ಸಮುದ್ರ ಆಗಿತ್ತು. ಅಂಥ ನೆಲದಲ್ಲಿ ಸಾಹಿತ್ಯಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯಬೇಕು ಎಂದರು.

ಹಿರಿಯ ಸಾಹಿತಿ ಪಿ.ಬಸವರಾಜ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ, ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಸಂಜೀವ ಕಾಳೇಕರ್, ಮುಖಂಡ ಶಬ್ಬೀರಪಾಶಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಾರೆಡ್ಡಿ, ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಪ್ರಭುಲಿಂಗಯ್ಯ ಟಂಕಸಾಲಿಮಠ ಮಾತನಾಡಿದರು.

ಪರಿಷತ್ತಿನ ವಲಯ ಅಧ್ಯಕ್ಷ ಚಂದ್ರಕಾಂತ ಸ್ವಾಮಿ ಸ್ವಾಗತಿಸಿದರು. ದೇವೇಂದ್ರಪ್ಪ ನಿರೂಪಿಸಿದರು. ಸಮ್ಮೇಳನಾಧ್ಯಕ್ಷರು, ತಾಯಿ ಭುವನೇಶ್ವರಿ ಚಿತ್ರದ ಮೆರವಣಿಗೆ ನಡೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.