ಔರಾದ್: ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಬುಧವಾರ ಕಾಶೆಂಪುರ (ಬಿ) ಗ್ರಾಮಕ್ಕೆ ಭೇಟಿ ನೀಡಿದರು.
ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಗ್ರಾಮಸ್ಥರು ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿದಿದ್ದರು. ಅಂತಹ ಗ್ರಾಮಗಳಿಗೆ ಭೇಟಿ ನೀಡಿ ಅವರ ಸಮಸ್ಯೆ ಏನು ಎಂಬುದನ್ನು ಕಲೆ ಹಾಕುತ್ತಿದ್ದು, ಗ್ರಾಮಕ್ಕೆ ಇಲ್ಲಿಯವರೆಗೆ ರಸ್ತೆ ಸೌಲಭ್ಯ ದಕ್ಕದಿರುವುದು ವಿಷಾದ. ಈ ಕ್ಷೇತ್ರ ಪ್ರತಿನಿಧಿಸುವ ಶಾಸಕ ಪ್ರಭು ಚವಾಣ್ ಜೊತೆ ಸಮಾಲೋಚಿಸಿ ಸಮಸ್ಯೆಗೆ ಪರಿಹಾರ ಹುಡುಕುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಮೂರು ವರ್ಷದ ಹಿಂದೆ ಶಾಸಕ ಚವಾಣ್ ರಸ್ತೆ ಅಭಿವೃದ್ಧಿಗೆ ₨25 ಲಕ್ಷ ಅನುದಾನ ಇಟ್ಟಿದ್ದರು. ಆದರೆ ಯಾರೋ ಒಬ್ಬರು ಆಕ್ಷೇಪ ಎತ್ತಿದ್ದಾರೆ ಎಂದು ನೆಪಹೇಳಿ ಹಣ ಕಬಳಿಕೆಯಾಗಿದೆ.
20 ವರ್ಷಗಳಿಂದ ರಸ್ತೆ ಮಾಡಿಸುವುದಾಗಿ ಹಲವರು ಹೇಳಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಗ್ರಾಮಸ್ಥರು ಮಾಜಿ ಸಚಿವರ ಎದುರು
ದೂರಿದರು.
ರಸ್ತೆ ಕಾಮಗಾರಿ ನನೆಗುದಿಗೆ ಬೀಳಲು ಕಾರಣ ಹಾಗೂ ಪರಿಹಾರ ಸಂಬಂಧ ಜಿಲ್ಲಾಧಿಕಾರಿ ಜೊತೆ ಚರ್ಚಿಸುವುದಾಗಿ ಕಾಶೆಂಪುರ ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ವಸಂತ ಬಿರಾದಾರ, ಶಿವರಾಜ, ರಾಮಶೆಟ್ಟಿ ಪಾಟೀಲ, ಮಾದರಾವ ಪಾಟೀಲ, ಅಂಕುಶ ಮುಳೆ, ಗುಂಡಪ್ಪ ಬಿರಾದಾರ ಇದ್ದರು.
‘ಮತದಾನ ಬಹಿಷ್ಕರಿಸಿದರೂ ಸಿಗದ ಸ್ಪಂದನೆ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ ಮಂಗಳವಾರ ವರದಿ ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.