ಬೀದರ್: ಹವಾಮಾನ ಬದಲಾವಣೆಯಿಂದಾಗಿ ಜಿಲ್ಲೆಯ ವಿವಿಧೆಡೆ ತೋಟಗಾರಿಕೆ ಬೆಳೆಗಳಲ್ಲಿ ಕೀಟ ಹಾಗೂ ರೋಗ ಬಾಧೆ ಕಂಡು ಬಂದಿದ್ದು, ರೈತರು ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ಪಿ.ಎಸ್. ಕುಲಕರ್ಣಿ ತಿಳಿಸಿದ್ದಾರೆ.
ಮಾವಿನ ಹೂಗಳಲ್ಲಿ ಬೂದಿ ರೋಗ, ರಸ ಹೀರುವ ಕೀಟಗಳ ಬಾಧೆ ಕಾಣಿಸಿದೆ. ಹೂ, ಕಾಯಿ ದೇಟುಗಳ ಮೇಲೆ ಮೊಸರಿನಂತೆ ಬಿಳಿ ಬಣ್ಣ ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣ. ರಸ ಹೀರುವ ಕೀಟಗಳ ಬಾಧೆಯಿಂದ ಹೂಗಳು, ಮಿಡಿಗಳು ಕಂದು ಬಣ್ಣಕ್ಕೆ ತಿರುಗಿ ಉದುರುತ್ತವೆ ಎಂದು ಹೇಳಿದ್ದಾರೆ.
ಬೂದಿ ರೋಗ ಹಾಗೂ ರಸ ಹೀರುವ ಕೀಟಗಳ ಬಾಧೆ ಕಂಡು ಬಂದಲ್ಲಿ ಲ್ಯಾಮಡಾ ಸೈಲೋಥ್ರಿನ್ 0.5 ಮಿ.ಲೀ. ಅಥವಾ ಕ್ವಿನಾಲ್ಫಾಸ್ 2 ಮಿ.ಲೀ., 1 ಗ್ರಾಂ. ಕಾರ್ಬನ್ ಡೆಜಿಮ್ ಪುಡಿ, ಅರ್ಧ ಮಿ.ಲೀ. ಅಚಿಟಿನ್ ದ್ರಾವಣವನ್ನು ಲೀಟರ್ ನೀರಿಗೆ ಬೆರೆಸಿ ಎಲೆ, ಹೂ, ಕಾಯಿ, ರೆಂಬೆ, ಕೊಂಬೆ, ಬುಡಕ್ಕೆ ಸಿಂಪಡಿಸಬೇಕು.
ಕಾಯಿಗಳು ಲಿಂಬೆಹಣ್ಣಿನಷ್ಟು ಗಾತ್ರವಾದಾಗ 1 ಗ್ರಾಂ. ಅಸಿಫೇಟ್ ಅಥವಾ 1 ಮಿ.ಲೀ. ಡೆಕಾಮೈಥಿನ್ ಔಷಧಿ, ಅರ್ಧ ಮಿ.ಲೀ. ಮಾಕ್ಸವೆಟ್ ಅಚಿಟ್ನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಹಣ್ಣು ಕೊಯ್ಯುವ 1 ತಿಂಗಳ ಮೊದಲು ಕಾರ್ಬನ್ಡೆಜಿಮ್ 1 ಗ್ರಾಂ. 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಪೇರಲ ಗಿಡಗಳಲ್ಲಿ ಬಿಳಿ ಬಿಳಿ ಉಣ್ಣೆ ಹುಳುಗಳು ಕಂಡು ಬಂದಿದ್ದು, ಇವುಗಳನ್ನು ನಿಯಂತ್ರಿಸಲು 3 ಮಿ.ಲೀ. ಬೇವಿನ ಎಣ್ಣೆ ಅಥವಾ 10 ಗ್ರಾಂ. ಬೇವಿನ ಸಾಬೂನು ಪುಡಿ ಅಥವಾ 250 ಮಿ.ಲೀ. ಹಸುವಿನ ಗಂಜಲ 15 ದಿನಗಳಿಗೊಮ್ಮೆ ಎರಡು- ಮೂರು ಬಾರಿ ಎಲೆಗಳ ಮೇಲೆ ಮತ್ತು ಕೆಳಗೆ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಹಾರ್ಟಿ ಕ್ಲಿನಿಕ್ನ ತೋಟಗಾರಿಕೆ ವಿಷಯ ತಜ್ಞ ಡಾ. ವಿಜಯಕುಮಾರ್ ರೇವಣ್ಣ (9482053985) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.