ಹುಮನಾಬಾದ್: ಇಲ್ಲಿನ ಮಿನಿ ವಿಧಾನಸೌಧ ಪ್ರಾಂಗಣದಲ್ಲಿ ವಿವಿಧ ಸೌಕರ್ಯ ಕೊರತೆ ಕುರಿತಂತೆ ಸೋಮವಾರ `ಪ್ರಜಾವಾಣಿ' ಪತ್ರಿಕೆಯಲ್ಲಿ ಪ್ರಕಟಗೊಂಡ ವಿಶೇಷ ವರದಿಯಿಂದ ಎಚ್ಚೆತ್ತುಕೊಂಡ ತಾಲ್ಲೂಕು ಆಡಳಿತ ಪಹಣಿ ವಿತರಣಾ ಕೇಂದ್ರಕ್ಕೆ ಹೊಂದಿಕೊಂಡಂತೆ ಶೆಡ್ ನಿರ್ಮಾಣ ಕಾರ್ಯ ಸೋಮವಾರ ಸಂಜೆ ಭರದಿಂದ ಸಾಗಿತ್ತು.
ಹುಮನಾಬಾದ್ ತಾಲ್ಲೂಕು ಕೇಂದ್ರ ಮಿನಿವಿಧಾನಸೌಧ ಕಟ್ಟಡ ನಿರ್ಮಾಣಗೊಂಡು ಹಲವು ವರ್ಷ ಗತಿಸಿದರೂ ಪಹಣಿ ವಿತರಣಾ ಕೇಂದ್ರಕ್ಕೆ ಹೊಂದಿಕೊಂಡು ನೆರಳು ಹಾಗೂ ಮಳೆಯಿಂದ ಬಚಾವ್ ಆಗಲು ಶೆಡ್ ನಿರ್ಮಾಣ, ಕುಳಿತುಕೊಳ್ಳುವುದಕ್ಕೆ ಆಸನ, ಕುಡಿಯುವ ನೀರಿನ ಸೌಲಭ್ಯ ಇಲ್ಲದಿರುವುದು ಹಾಗೂ ಇದ್ದೂ ಇಲ್ಲದಂತಿರುವ ಸಾಮೂಹಿಕ ಶೌಚಾಲಯ ಕುರಿತು ಪ್ರಕಟಗೊಂಡ ವರದಿಯಿಂದ ಎಚ್ಚೆತ್ತುಕೊಂಡ ತಾಲ್ಲೂಕು ಆಡಳಿತ ಮೊದಲ ಹಂತದಲ್ಲಿ ಪಹಣಿ ಕೇಂದ್ರ ಪಕ್ಕ ಶೆಡ್ ನಿರ್ಮಾಣ ಕಾರ್ಯ ಆರಂಭಿಸಿದ್ದು ಕಂಡು ಬಂದಿತು.
ತಾಲ್ಲೂಕು ಆಡಳಿತ ಕ್ರಮದ ಕುರಿತು ಪಹಣಿ ಪಡೆಯಲು ಬಂದ ವಿದ್ಯಾಸಾಗರ, ನರಸಪ್ಪ, ಶಿವಪುತ್ರಪ್ಪ, ಶಾಮರಾವ ಸಂತಸ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಅವರಿಂದ ಅಗತ್ಯ ನೆರವು ಪಡೆದು ಇನ್ನುಳಿದ ಸೌಲಭ್ಯಗಳನ್ನು ಸಾಧ್ಯವಾದಷ್ಟು ಶೀಘ್ರ ಆರಂಭಿಸಿ, ಜನತೆಗೆ ಉತ್ತಮ ಸೇವೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಹಸೀಲ್ದಾರ ಬಾಲರಾಜ ದೇವರಖಾದ್ರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.