ADVERTISEMENT

ವಚನಗಳಲ್ಲಿ ವೈಜ್ಞಾನಿಕ ವಿಚಾರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 8:45 IST
Last Updated 7 ಫೆಬ್ರುವರಿ 2012, 8:45 IST

ಬೀದರ್: ಶರಣರ ವಚನಗಳಲ್ಲಿ ವೈಜ್ಞಾನಿಕ ವಿಚಾರಗಳನ್ನು ಕಾಣಬಹುದಾಗಿದೆ ಎಂದು ಮುದ್ದೆಬಿಹಾಳದ ರುದ್ರೇಶ ಗಂಗಾಧರ ಕಿತ್ತೂರು ನುಡಿದರು.

ವಚನ ವಿಜಯೋತ್ಸವ ಅಂಗವಾಗಿ ನಗರದ ಬಸವಗಿರಿಯಲ್ಲಿ ಸೋಮವಾರ ನಡೆದ `ವಚನಗಳು- ವೈಜ್ಞಾನಿಕ ಮನೋಭಾವ~ ಗೋಷ್ಠಿಯಲ್ಲಿ ಮಾತನಾಡಿದರು.

ಚನ್ನಬಸವಣ್ಣವರ `ಕರಣ ಹಸಿಗೆ~ ವೈದ್ಯಕೀಯ ಪಠ್ಯವಾಗಲು ಯೋಗ್ಯ ಗ್ರಂಥವಾಗಿದೆ. ಇದರಲ್ಲಿ ಮಾನವನ ಶರೀರ ರಚನೆ ಮತ್ತು ಕಾರ್ಯ ನಿರ್ವಹಣೆ ಬಗ್ಗೆ ವಿವರಿಸಲಾಗಿದೆ. ಆದರೆ, ಇದನ್ನು ಅರ್ಥೈಸಿಕೊಳ್ಳದೇ ಇರುವುದು ವಿಷಾದದ ಸಂಗತಿಯಾಗಿದೆ ಎಂದು ಹೇಳಿದರು.

ರಕ್ತದಲ್ಲಿ ನಾಲ್ಕು ಗುಂಪುಗಳಿರುವುದನ್ನು ಶರಣರು ಗುರುತಿಸಿದ್ದರು. ಸೃಷ್ಟಿಯ ರಚನೆ ಕುರಿತ ಪ್ರಸ್ತಾಪ ಅಲ್ಲಮಪ್ರಭುಗಳ ವಚನಗಳಲ್ಲಿ ಕಾಣಬಹುದು ಎಂದು ತಿಳಿಸಿದರು.

ಶರಣರು 12ನೇ ಶತಮಾದಲ್ಲಿಯೇ ವೈಜ್ಞಾನಿಕ ಮಹತ್ವವನ್ನು ಸಾರಿರುವುದು ಅಚ್ಚರಿ ಉಂಟು ಮಾಡುತ್ತದೆ. ಆದರೆ, ಈ ವಿಚಾರದಲ್ಲಿ ಶರಣರು ಮೊದಲಿಗರು ಎನ್ನುವುದನ್ನು ಜಗತ್ತಿಗೆ ಪರಿಚಯಿಸಬೇಕಿದೆ ಎಂದರು.
ವಚನ ಸಾಹಿತ್ಯ ಮನುಕುಲಕ್ಕೆ ದಿಕ್ಸೂಚಿ ಆಗಿವೆ ಎಂದು ಹುಬ್ಬಳ್ಳಿಯ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಬಿ.ಜಿ. ಗೋವಿಂದಪ್ಪ ಪ್ರತಿಪಾದಿಸಿದರು.

ಪ್ರಸ್ತುತ ಅಮೆರಿಕ ತನ್ನ ಗಡಿ ರಕ್ಷಿಸಲು ವರ್ಷಕ್ಕೆ 600 ಬಿಲಿಯನ್ ಡಾಲರ್ (30 ಲಕ್ಷ ಕೋಟಿ) ಖರ್ಚು ಮಾಡುತ್ತಿದೆ. ಇದಕ್ಕಾಗಿ ಚೀನಾ 115 ಬಿಲಿಯನ್ ಡಾಲರ್ ಮತ್ತು ಭಾರತ 35 ಬಿಲಿಯನ್ ಡಾಲರ್ ವ್ಯಯ ಮಾಡುತ್ತಿವೆ. ಒಂದು ವೇಳೆ ಇದೇ ಹಣವನ್ನು ದೇಶದ ಅಭಿವೃದ್ಧಿಗೆ ಖರ್ಚು ಮಾಡಿದರೆ ಎಲ್ಲರ ಬಾಳು ಹಸನಾಗುತ್ತದೆ ಎಂದು ಹೇಳಿದರು.

ಕೊಡಂಗಲ್ ಜಗದ್ಗುರು ಶಿವಯೋಗೀಶ್ವರ ರಾಜಯೋಗೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಶಿವಶಂಕರ ಉಸ್ತುರ್ಗೆ ಉದ್ಘಾಟಿಸಿದರು.

ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ನೇತೃತ್ವ ವಹಿಸಿದ್ದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾ. ವೀರಣ್ಣ ರಾಜೂರು ಅಧ್ಯಕ್ಷತೆ ವಹಿಸಿದ್ದರು. ಎಕ್ಸಂಬಾ ಬೆಳಗಾವಿ ಸಹಕಾರ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಬಸವ ಪ್ರಾರ್ಥನೆ ಸಿಡಿ ಬಿಡುಗಡೆಗೊಳಿಸಿದರು.

ಡಾ. ಬಸವರಾಜ ಪಾಟೀಲ್ ಅಷ್ಟೂರು, ಡಾ. ಅಮರ ಏರೋಳಕರ್, ಸುವರ್ಣಮ್ಮ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್, ಶೈಲಾ ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.

ಬಸವತೀರ್ಥ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳು ವಚನ ನೃತ್ಯ ಪ್ರಸ್ತುತಪಡಿಸಿದರು. ಆಕಾಶವಾಣಿ ಕಲಾವಿದ ಮಹಾಲಿಂಗಪ್ಪ ಗುಂಡಪ್ಪ ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.