ಬೀದರ್: ಸಾಮೂಹಿಕ ಇಷ್ಟಲಿಂಗ ಯೋಗದೊಂದಿಗೆ ನಗರದ ಬಸಗಿರಿಯಲ್ಲಿ ಬುಧವಾರ ಮೂರು ದಿನಗಳ ವಚನ ವಿಜಯೋತ್ಸವ ಆರಂಭಗೊಂಡಿತು. ಪೂರ್ವದಿಂದ ಸೂರ್ಯನ ಹೊಂಗಿರಣಗಳು ಹೊರಸೂಸಲು ಪ್ರಾರಂಭಿಸಿದಂತೆ ಶರಣ ಶರಣೆಯರು ಬಿಳಿ ವಸ್ತ್ರ ಧರಿಸಿ, ಕಾವಿ ಸ್ಕಾರ್ಪ್ ಹಾಕಿಕೊಂಡು ಬಸವಗಿರಿಯತ್ತ ಹೆಜ್ಜೆ ಹಾಕಿದರು. ಪಂಡಿತ ಡಾ. ನರಸಿಂಹಲು ವಡವಾಟಿಯವರ ಕ್ಲಾರಿಯೋನೆಟ್ ವಾದನದಲ್ಲಿ ಸುಪ್ರಭಾತದೊಂದಿಗೆ ಕಾರ್ಯಕ್ರಮ ಶುರುವಾಯಿತು. ಕ್ಲಾರಿಯೋನೆಟ್ನ ನಾದ ಬಸವಗಿರಿಯಲ್ಲಿ ಮುಂಜಾವಿನ ತಂಪು ವಾತಾವರಣದಲ್ಲಿ ಅನುರಣಿಸಿ ಹೊಸಲೋಕಕ್ಕೆ ಕರೆದೊಯ್ದಿತು.
ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಅವರ ಮಾರ್ಗದರ್ಶನದಲ್ಲಿ ನೂರಾರು ಜನ ಸಾಮೂಹಿಕ ಇಷ್ಟಲಿಂಗ ಯೋಗದಲ್ಲಿ ಪಾಲ್ಗೊಂಡು, ವಿಶ್ವ ಶಾಂತಿಗೆ ಸಂಕಲ್ಪಿಸಿ ಪೂಜೆ ನೆರವೇರಿಸಿಕೊಂಡರು. ಇಷ್ಟಲಿಂಗ ಯೋಗ ಮತ್ತು ವಚನ ನಮ್ಮ ಎರಡು ಕಣ್ಣುಗಳಿದ್ದಂತೆ ಎಂದು ಸಾನ್ನಿಧ್ಯ ವಹಿಸಿದ್ದ ವಿಶ್ವನಾಥ ಸ್ವಾಮೀಜಿ ನುಡಿದರು. ಬಸವಣ್ಣನವರಿಂದಾಗಿ ನಾವು ಶೋಷಣೆಯಿಂದ ಮುಕ್ತರಾಗಿದ್ದೇವೆ. ನಮ್ಮ ಸ್ವತಂತ್ರ ಅಸ್ತಿತ್ವ ತೋರಿಸಲು ಜನಗಣತಿಯಲ್ಲಿ ‘ಲಿಂಗಾಯತ’ ಎಂದೇ ಬರೆಸಬೇಕು ಎಂದರು.
ಮೂಢ ಭಕ್ತಿಯಿಂದ ಸಮಾಜ ಮುಕ್ತವಾಗಬೇಕು. ದೇವನೊಬ್ಬನೇ ಎಂಬ ಶರಣ ತತ್ವ ಅರಿಯಬೇಕು ಎಂದು ನೇತೃತ್ವ ವಹಿಸಿದ್ದ ಡಾ. ಗಂಗಾಂಬಿಕೆ ಅಕ್ಕ ಹೇಳಿದರು. ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷೆ ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಶ್ರೀದೇವಿ ಕರಂಜಿ, ಪ್ರೇಮಕ್ಕ ಹೊರಟ್ಟಿ, ಪ್ರಮುಖರಾದ ಬಾಬುರಾವ ಮದಕಟ್ಟಿ, ಶಿವಾನಂದ ಪಾಟೀಲ್, ಮಹಾಂತಯ್ಯ ತೀರ್ಥಾ, ಕಾಶಿನಾಥ ಶೆಟಕಾರ, ಶಕುಂತಲಾ ವಾಲಿ, ಸೋಮನಾಥಪ್ಪ ಅಷ್ಟೂರೆ, ಜಿರೋಬೆ, ಮಡಿವಾಳಪ್ಪ ಶೆಟಕಾರ, ಬಸವರಾಜ ಮಠಪತಿ, ನಾಗೇಂದ್ರಪ್ಪ ಎಂಪಳ್ಳಿ, ಶ್ರೀಕಾಂತ ಸ್ವಾಮಿ, ಡಾ. ಎಸ್.ಆರ್. ಮಠಪತಿ. ಜಗನ್ನಾಥ ಮೂಲಗೆ ಉಪಸ್ಥಿತರಿದ್ದರು. ಜೇವರ್ಗಿಯ ಶಿವನಗೌಡ ಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ಸುವರ್ಣಾ ಚಿಮಕೋಡೆ ನಿರೂಪಿಸಿದರು ಶಾಂತಾ ಖಂಡ್ರೆ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.