ADVERTISEMENT

ಹುಲಸೂರನಲ್ಲಿ ಇಂದಿನಿಂದ ಶರಣ ಸಂಸ್ಕೃತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 10:45 IST
Last Updated 28 ಜನವರಿ 2012, 10:45 IST

ಬಸವಕಲ್ಯಾಣ: ತಾಲ್ಲೂಕಿನ ಹುಲಸೂರನ ಗುರುಬಸವೇಶ್ವರ ಸಂಸ್ಥಾನ ಮಠದ ಲಿಂ.ಬಸವಕುಮಾರ ಶಿವಯೋಗಿಗಳ ಜನ್ಮ ಶತಮಾನೋತ್ಸವ ಮತ್ತು ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಷಷ್ಠಬ್ದಿ ಮಹೋತ್ಸವ ಅಂಗವಾಗಿ ಜನವರಿ 28 ರಿಂದ ಮೂರು ದಿನಗಳವರೆಗೆ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ.

ಇದಲ್ಲದೆ ರೈತರ ಸಮಾವೇಶ, ಉಚಿತ ಕಲ್ಯಾಣ ಮಹೋತ್ಸವ, ಗ್ರಂಥ ಬಿಡುಗಡೆ ಸಹ ನಡೆಯಲಿದ್ದು ಕಾರ್ಯಕ್ರಮಕ್ಕಾಗಿ ಜಿಬಿಕೆ ಪ್ರೌಢಶಾಲೆ ಆವರಣದಲ್ಲಿ ವೇದಿಕೆ ಮತ್ತು ಮಂಟಪ ನಿರ್ಮಿಸಲಾಗಿದೆ. ಮಠದ ಎದುರಿಗೆ ಮತ್ತು ಮುಖ್ಯರಸ್ತೆಯಲ್ಲಿ ಸ್ವಾಗತ ಕಮಾನುಗಳನ್ನು ಹಾಕಲಾಗಿದ್ದು ಎಲ್ಲೆಡೆ ಹಬ್ಬದ ಸಂಭ್ರಮ ಎದ್ದು ಕಾಣುತ್ತಿದೆ.

28 ರಂದು ಬೆಳಿಗ್ಗೆ ವಚನ ಸಾಹಿತ್ಯ ಮತ್ತು ರೈತರ ಮೆರವಣಿಗೆ ನಡೆಯಲಿದೆ. ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಮೆರವಣಿಗೆ ಉದ್ಘಾಟಿಸುವರು. ಸಂಜೆ 5 ಗಂಟೆಗೆ ಗದಗ ಜಗದ್ಗುರು ಡಾ.ಸಿದ್ಧಲಿಂಗ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಶರಣ ಸಂಸ್ಕೃತಿ ಉತ್ಸವ ಉದ್ಘಾಟನೆ ಮತ್ತು ರೈತರ ಸಮಾವೇಶ ನಡೆಯುತ್ತದೆ. ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಉದ್ಘಾಟಿಸುವರು. ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹಾರಕೂಡ ಚೆನ್ನವೀರ ಶಿವಾಚಾರ್ಯರು, ಮಹಾರಾಷ್ಟ್ರದ ರೈತ ಮುಖಂಡ ಪಾಶಾ ಪಟೇಲ್, ಡಾ.ಮಲ್ಲಣ್ಣ ನಾಗರಾಳ, ಚಂದ್ರಶೇಖರ ಜಮಖಂಡಿ ಪಾಲ್ಗೊಳ್ಳುವರು.

ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಕೃಷಿ ತಜ್ಞ ಸುಭಾಷ ಪಾಳೇಕರ್ ಅವರಿಗೆ ಕಲ್ಯಾಣಶ್ರೀ ಪ್ರಶಸ್ತಿಕೊಟ್ಟು ಸನ್ಮಾನಿಸಲಾಗುತ್ತದೆ ಮತ್ತು ಲಿಂ.ಬಸವರಾಜ ತಂಬಾಕೆ ಸ್ಮರಣಾರ್ಥ ಐದು ಜನ ಪ್ರಗತಿಪರ ರೈತರಿಗೆ ರೈತಶ್ರೀ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಗುತ್ತದೆ.
29 ರಂದು ಬೆಳಿಗ್ಗೆ ಕಲ್ಯಾಣ ಮಹೋತ್ಸವ ನಡೆಯುತ್ತದೆ.

ಚಿತ್ರದುರ್ಗ ಶಿವಮೂರ್ತಿ ಮುರುಘರಾಜೇಂದ್ರ ಶರಣರು, ಶಿರಹಟ್ಟಿ ಫಕೀರ ಸಿದ್ಧರಾಮ ಸ್ವಾಮೀಜಿ, ಕೂಡಲಸಂಗಮ ಜಯಮೃತ್ಯುಂಜಯ ಸ್ವಾಮೀಜಿ, ಬೈಲೂರು ನಿಜಗುಣಾನಂದ ಸ್ವಾಮೀಜಿ ನೇತೃತ್ವ ವಹಿಸುವರು.

ಸಚಿವ ಗೋವಿಂದ ಕಾರಜೋಳ ಉದ್ಘಾಟಿಸುವರು. ಮಾಜಿ ಸಚಿಚ ಗುರುಪಾದಪ್ಪ ನಾಗಮಾರಪಳ್ಳಿ, ಡಾ.ಜಯಶ್ರೀ ದಂಡೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮಲ್ಲಿಕಾರ್ಜುನ ಖೂಬಾ, ಡಿ.ಕೆ.ಸಿದ್ರಾಮ ಪಾಲ್ಗೊಳ್ಳುವರು.

ಮಧ್ಯಾಹ್ನ 5 ಗಂಟೆಗೆ `ಪ್ರಚಲಿತ ಸಮಸ್ಯೆ ಮತ್ತು ಪರಿಹಾರ~ ಗೋಷ್ಠಿ ನಡೆಯುತ್ತದೆ. ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಈ.ಟಿ.ಪುಟ್ಟಯ್ಯ ಉದ್ಘಾಟಿಸುವರು. ಹರಿಹರ ಜಗದ್ಗುರು ಸಿದ್ಧಲಿಂಗ ಮಹಾಸ್ವಾಮೀಜಿ, ಇಳಕಲ್ ಗುರುಮಹಾಂತ ಸ್ವಾಮೀಜಿ, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಜಮಖಂಡಿ ಚೆನ್ನಬಸವ ಮಹಾಸ್ವಾಮೀಜಿ ಭರತನೂರು ಚಿಕ್ಕನಂಜೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು. ಬೀದರ ಪಶು ವಿಶ್ವವಿದ್ಯಾಲಯದ ಕುಲಪತಿ ಸುರೇಶ ಹೊನ್ನಪ್ಪಗೋಳ, ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ ಹುಮನಾಬಾದ್, ಮಾಜಿ ಶಾಸಕ ರಾಜೇಂದ್ರ ವರ್ಮಾ ಉಪಸ್ಥಿತರಿರುವರು.

30 ರಂದು ಬೆಳಿಗ್ಗೆ ಲಿಂ.ಬಸವಕುಮಾರ ಶಿವಯೋಗಿಗಳ ಜನ್ಮಶತಮಾನೋತ್ಸವ ಅಂಗವಾಗಿ ಮಂಟಪ ಪೂಜೆ ನಡೆಯುತ್ತದೆ. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ, ಚಿತ್ರದುರ್ಗ ಶಿವಮೂರ್ತಿ ಮುರುಘರಾಜೇಂದ್ರ ಶರಣರು ನೇತೃತ್ವ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ ಉದ್ಘಾಟಿಸುವರು. ಶಾಸಕರಾದ ಬಸವರಾಜ ಪಾಟೀಲ ಅಟ್ಟೂರ್, ಬಂಡೆಪ್ಪ ಕಾಶೆಂಪುರ, ರಾಜಶೇಖರ ಪಾಟೀಲ ಹುಮನಾಬಾದ್ ಮುಂತಾದವರು ಪಾಲ್ಗೊಳ್ಳುವರು ಮಧ್ಯಾಹ್ನ 3 ಗಂಟೆಗೆ ತೊಟ್ಟಿಲು ಕಾರ್ಯಕ್ರಮ ನಡೆಯುತ್ತದೆ.

ಅಂದು ಸಂಜೆ 5 ಗಂಟೆಗೆ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಮಾರೋಪ ಮತ್ತು ಗುರುವಂದನಾ ಸಮಾರಂಭ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಬೆಲ್ದಾಳ ಸಿದ್ಧರಾಮ ಶರಣರು, ಶಾಸಕ ಈಶ್ವರ ಖಂಡ್ರೆ, ಸಾಹಿತಿ ಡಾ.ವಿಕ್ರಮ ವಿಸಾಜಿ, ಪತ್ರಕರ್ತ ಶಿವಶರಣಪ್ಪ ವಾಲಿ ಮುಂತಾದವರು ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT