ADVERTISEMENT

‘ದೌರ್ಜನ್ಯ: ದನಿ ಎತ್ತದಿರುವುದೂ ಅಪರಾಧ’

ವಿಭಾಗ ಮಟ್ಟದ ‘ಸಮಗ್ರ ಮಕ್ಕಳ ರಕ್ಷಣಾ ಯೋಜನೆ’ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 5:24 IST
Last Updated 4 ಮಾರ್ಚ್ 2014, 5:24 IST

ಬೀದರ್: ‘ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣದ ವಿರುದ್ಧ ಧ್ವನಿ ಎತ್ತಿ ಪ್ರತಿಭಟಿಸ­ದಿರುವುದು ಅಪರಾಧಕ್ಕಿಂತ ದೊಡ್ಡ ಅಪರಾಧ’ ಎಂದು ಪ್ರಧಾನ ಜಿಲ್ಲಾ ಮತ್ತು ಸಿವಿಲ್‌ ನ್ಯಾಯಧೀಶರಾದ ಡಾ. ಶಶಿಕಲಾ ಎಂ.ಎ. ಉರಣ್ಕರ್‌ ಹೇಳಿದರು.

ಜಿಲ್ಲಾಡಳಿತದ ಸಹಯೋಗದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ‘ಸಮಗ್ರ ಮಕ್ಕಳ ರಕ್ಷಣಾ ಯೋಜನೆ’ ಕುರಿತು ನಗರದ ಜಿಲ್ಲಾ ರಂಗ­ಮಂದಿರದಲ್ಲಿ ಸೋಮವಾರ ಆಯೋಜಿ­ಸಿದ್ದ ಒಂದು ದಿನದ ವಿಭಾಗಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಪರಿಚಿತರು, ಸಂಬಂಧಿ­ಕರೇ ಕಾರಣರಾಗಿರುತ್ತಾರೆ. ಪೈಕಿ ಶೇ. 90 ರಷ್ಟು ಪ್ರಕರಣಗಳು ಮನೆ, ಕಚೇರಿ, ಪರಿಚಿತರ ಮನೆಯಲ್ಲಿಯೇ ನಡೆ­ಯುತ್ತವೆ. ಶೇ10 ರಷ್ಟು ಪ್ರಕರಣಗಳು ಮಾತ್ರ ಹೊರಗಡೆ ನಡೆಯುತ್ತವೆ. ಆದರೆ ಹೆಚ್ಚಿನ ಪ್ರಕರಣಗಳು ಕಾನೂನಿನ ಚೌಕಟ್ಟಿಗೆ ಬರುತ್ತಿಲ್ಲ ಎಂದರು.

ಶೇ34 ರಷ್ಟು ಅತ್ಯಾಚಾರ ಪ್ರಕರಣಗಳಿಗೆ ಪರಿಚಿತರು, ಸಂಬಂಧಿ­ಕರೇ ಕಾರಣರಾದರೆ, ಉಳಿದ ಶೇ 54 ರಷ್ಟು ಅತ್ಯಾಚಾರ ಪ್ರಕರಣಗಳು ಹೊರಗಿ­ನ­ವರಿಂದ ನಡೆಯುತ್ತವೆ ಎಂದು ಹೇಳಿದರು.

ಅತ್ಯಾಚಾರ ಮಾಡುವವರು ಅಪ­ರಿಚಿತರು ಆಗಿರುವುದಿಲ್ಲ. ಮಕ್ಕಳ ಹಕ್ಕುಗಳ ಸಂರಕ್ಷಣೆಯ ವಿಶೇಷ ನ್ಯಾಯಾಧೀಶರ ಜವಾಬ್ದಾರಿ ವಹಿಸಿ­ಕೊಂಡ ನಾನು ಗಮನಿಸಿರುವ ಅತ್ಯಾ­ಚಾರ ಪ್ರಕರಣಗಳ ಪೈಕಿ ಇಂಥ ಪ್ರಕರಣಗಳೇ ಹೆಚ್ಚು. ಇಂಥದು ಬಹಳ ನೋವು ತರುತ್ತದೆ ಎಂದರು.

ಮಕ್ಕಳ ಆಶ್ರಯ ತಾಣಗಳಾದ ಸಂಘ ಸಂಸ್ಥೆಗಳಲ್ಲಿಯೇ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಅಲ್ಲಿ ಕೆಲಸ ಮಾಡುವ ಪುರುಷರಿಂದಲೇ ಅಲ್ಲಿನ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗು­ತ್ತಿದ್ದಾರೆ. ಆದರೆ ಭಯದಿಂದ ಹೆಣ್ಣು ಮಕ್ಕಳು ಇದನ್ನು ಹೇಳಿಕೊಳ್ಳು­ವುದಿಲ್ಲ ಎಂದರು.

ಯಾವುದೇ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ನಡೆದಿದೆ ಎಂದು ಗೊತ್ತಾದ ಕೂಡಲೇ ಅಂತಹ ಪ್ರಕರಣಗಳನ್ನು ಕಾನೂನು ಚೌಕಟ್ಟಿನಲ್ಲಿ ತರಬೇಕು. ಇದರಿಂದ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಸಾಧ್ಯ ಎಂದು ಹೇಳಿದರು.

ರಾಜಕಾರಣಿಗಳು,  ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿ­ಕೊಂಡು ಇಂಥ ಪ್ರಕರಣಗಳಲ್ಲಿ ರಕ್ಷಣೆಗೆ ನಿಂತರೆ ಅದನ್ನು ಖಂಡಿಸಬೇಕು. ಗಂಭೀರವಾಗಿ ಪರಿಗಣಿಸಿ ನೇರವಾಗಿ ಕಾನೂನಿನ ಚೌಕಟ್ಟಿಗೆ ತಂದು ಶಿಕ್ಷೆಗೆ ಗುರಿ ಪಡಿಸುವುದು ಅಗತ್ಯ ಎಂದರು.

ಅಂಗನವಾಡಿಗಳ ದುಃಸ್ಥಿತಿ ಕುರಿತು ಗಮನಸೆಳೆದ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್, ಬಹುತೇಕ ಯೋಜನೆ­ಗಳು ಪರಿಣಾಮಕಾರಿಯಾಗಿ ಜಾರಿಗೆ ಬರದಿರಲು, ಅಧಿಕಾರಿಗಳು, ಸಿಬ್ಬಂದಿ ನಿರಾಸಕ್ತಿಯೇ ಕಾರಣ ಎಂದರು.

‘ಬಾಲ ನ್ಯಾಯ ಕಾಯ್ದೆ’ ಕುರಿತು ಬಾಲ ನ್ಯಾಯ ಮಂಡಳಿ ಅಧ್ಯಕ್ಷ ಸಿ.ಆರ್‌. ರಾಜಾ ಸೋಮಶೇಖರ, ‘ದತ್ತು ಪ್ರಕ್ರಿಯೆ’ ಕುರಿತು ಬೆಂಗಳೂರಿನ ಸ್ನೇಹಾಲಯದ ಸಿಸ್ಟರ್‌ ಸಿಂಥಿಯಾ, ‘ಆಸಾಂಸ್ಥಿಕ ಸೇವೆಗಳು’ ಕುರಿತು ಗುಲ್ಬರ್ಗದ ಭರತೇಶ್ ಶೀಲವಂತ್‌  ಮಾತನಾಡಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾ­ಧಿಕಾರಿ ಸಂಗೀತಾ, ಸಮಗ್ರ ಮಕ್ಕಳ ರಕ್ಷಣಾ ಸಂಸ್ಥೆ ಯೋಜನಾ ನಿರ್ದೇಶಕಿ ಶಶಿಕಲಾ ಯು. ಶೆಟ್ಟಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರತ್ನಾ ಬಿ. ಕಲಮದಾನಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಎಸ್‌. ಇಟಕಂಪಳ್ಳಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.