ADVERTISEMENT

ಬೀದರ್‌ | ಮತ್ತೆ 17 ಜನರಿಗೆ ಕೋವಿಡ್‌ ಸೋಂಕು

ಕೋವಿಡ್‌ ವೈರಾಣು ಪೀಡಿತರ ಸಂಖ್ಯೆ 607ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 15:07 IST
Last Updated 30 ಜೂನ್ 2020, 15:07 IST
ಬೀದರ್‌ನ ಬಿಸಿಎಂ ವಿದ್ಯಾರ್ಥಿ ವಸತಿ ನಿಲಯದ ಕ್ವಾರಂಟೈನ್‌ ಕೇಂದ್ರಕ್ಕೆ ಆಹಾರ ಪೂರೈಕೆ ಮಾಡಿದ ಕಸದ ಗಾಡಿ
ಬೀದರ್‌ನ ಬಿಸಿಎಂ ವಿದ್ಯಾರ್ಥಿ ವಸತಿ ನಿಲಯದ ಕ್ವಾರಂಟೈನ್‌ ಕೇಂದ್ರಕ್ಕೆ ಆಹಾರ ಪೂರೈಕೆ ಮಾಡಿದ ಕಸದ ಗಾಡಿ   
ಬೀದರ್: ಜಿಲ್ಲೆಯಲ್ಲಿ ಚಿಟಗುಪ್ಪದ 14 ಹಾಗೂ ಬೀದರ್‌ನ 3 ಜನ ಸೇರಿ ಮತ್ತೆ 17 ಜನರಿಗೆ ಕೋವಿಡ್‌ –19 ದೃಢಪಟ್ಟಿದೆ. ಈ ಮೂಲಕ ಸೋಂಕು ಪೀಡಿತರ ಸಂಖ್ಯೆ 607ಕ್ಕೆ ತಲುಪಿದೆ.

ಚಿಟಗುಪ್ಪದ ಇಬ್ಬರು ಬಾಲಕಿಯರು ಸೇರಿ ಐವರು ಮಹಿಳೆಯರು, ಏಳು ಪುರುಷರು ಹಾಗೂ ಬೀದರ್‌ನ ಮೂವರು ಪುರುಷರಿಗೆ ಕೋವಿಡ್ –19 ತಗುಲಿದೆ.

ಜಿಲ್ಲೆಯಲ್ಲಿ ಈವರೆಗೆ 19 ಜನ ಕೋವಿಡ್ –19 ನಿಂದ ಮೃತಪಟ್ಟಿದ್ದಾರೆ. ಬ್ರಿಮ್ಸ್‌ನ ವಿಶೇಷ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆದ 477 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 192 ಕಂಟೇನ್ಮೆಂಟ್‌ ಪ್ರದೇಶಗಳ ಪೈಕಿ 153 ಸಕ್ರಿಯವಾಗಿವೆ.

ಆಸ್ಪತ್ರೆಯ ನೋಂದಣಿ ಅಮಾನತು: ಕೋವಿಡ್– 19 ನಿಯಂತ್ರಣದಲ್ಲಿ ಎಸ್‌ಒಪಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಬಸವಕಲ್ಯಾಣದ ಖಾಸಗಿ ಆಸ್ಪತ್ರೆಯೊಂದರ ನೋಂದಣಿ ಅಮಾನತು ಮಾಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ADVERTISEMENT

ಹಲ್ಲೆ ನಡೆಸಿದವರ ವಿರುದ್ಧ ಕ್ರಮ:ಕೋವಿಡ್‌ –19 ಜಿಲ್ಲಾ ನೋಡಲ್ ಅಧಿಕಾರಿಯಾದ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಗೋವಿಂದ ಬಿ. ಅವರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ರಾಮಚಂದ್ರನ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ಅವರಿಗೆ ನಿರ್ದೇಶನ ನೀಡಿದ್ದಾರೆ.

‘ಸಮುದಾಯದ ಆರೋಗ್ಯ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಕೊರೊನಾ ವಾರಿಯರ್‌ ಮೇಲೆ ಹಲ್ಲೆ ನಡೆಸಿರುವುದು ಅಮಾನವೀಯ. ಇದು ನೇರವಾಗಿ ಜಿಲ್ಲಾಡಳಿತದ ಮೇಲೆ ನಡೆಸಿದ ಹಲ್ಲೆಯಾಗಿದೆ. ತಪ್ಪಿತಸ್ಥರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.