ADVERTISEMENT

ಹೆಚ್ಚುವರಿ ಸಿಬ್ಬಂದಿಗೆ ಪ್ರತಿ ತಿಂಗಳು ₹ 3 ಕೋಟಿ ವೇತನ ಪಾವತಿ: ಪ್ರೊ.ಶರಣಪ್ಪ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 13:17 IST
Last Updated 27 ಜನವರಿ 2023, 13:17 IST
ಪ್ರೊ.ಶರಣಪ್ಪ ಹಲಸೆ
ಪ್ರೊ.ಶರಣಪ್ಪ ಹಲಸೆ   

ಬೀದರ್: ‘ಹಿಂದೆ ಹೆಚ್ಚುವರಿಯಾಗಿ 300 ಸಿಬ್ಬಂದಿಯನ್ನು ನೇಮಕ ಮಾಡಿಕೊಂಡ ಕಾರಣ ವಿಶ್ವವಿದ್ಯಾಲಯಕ್ಕೆ ಪ್ರತಿ ತಿಂಗಳು ₹ 3 ಕೋಟಿ ವೇತನ ಪಾವತಿಸಲೇ ಬೇಕಾದ ಸ್ಥಿತಿ ಇದೆ. ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು’ ಎಂದು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ಹಲಸೆ ಹೇಳಿದರು.

‘ಬೀದರ್‌ನ ಪ್ರಾದೇಶಿಕ ಕೇಂದ್ರಕ್ಕೆ ಅಗತ್ಯವಿಲ್ಲದಿದ್ದರೂ ಆರು ಜನ ಸಿಪಾಯಿಗಳನ್ನು ನೇಮಕ ಮಾಡಿಕೊಂಡಿದ್ದನ್ನು ಒಪ್ಪಿಕೊಂಡ ಅವರು ಹಿಂದಿನವರು ತಮ್ಮ ವಿವೇಚನೆ ಬಳಸಿ ನೇಮಕ ಮಾಡಿಕೊಂಡಿದ್ದಾರೆ. ಅವರನ್ನು ಈಗ ತ್ವರಿತವಾಗಿ ಸೇವೆಯಿಂದ ಬಿಡುಗಡೆ ಮಾಡಲಾಗದು. ಕಾನೂನು ಚೌಕಟ್ಟಿನ ಅಡಿಯಲ್ಲೇ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ನಗರದ ಕರ್ನಾಟಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ವಿಶ್ವವಿದ್ಯಾಲಯದಿಂದ ಶೀಘ್ರ 10 ಹೊಸ ಕೋರ್ಸ್‌ಗಳನ್ನು ಅರಂಭಿಸಲಾಗುವುದು. ಹೊಸ ಕೋರ್ಸ್‌ ಶುರು ಮಾಡಲು ಯಾವುದೇ ಸಮಸ್ಯೆ ಇಲ್ಲ. ವಿಶ್ವವಿದ್ಯಾಲಯದ ಕೋರ್ಸ್‌ಗೆ ಯಾವುದೇ ವಿದ್ಯಾರ್ಥಿ ಪ್ರವೇಶ ಪಡೆದರೂ ಅವರಿಗೆ ಪಠ್ಯ ಸಾಹಿತ್ಯ ಪೂರೈಸಲಾಗುವುದು. ಈಗಾಗಲೇ ವಿಶ್ವವಿದ್ಯಾಲಯದ ಬಳಿ ₹ 6.75 ಕೋಟಿ ಠೇವಣಿ ಇದೆ. ಹಣಕಾಸಿನ ಸಮಸ್ಯೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ರಾಜ್ಯದಾದ್ಯಂತ ಒಟ್ಟು 1 ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕದ 20 ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವುದು. ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು’ ಎಂದು ಹೇಳಿದರು.

‘ಬಿಎಸ್‌ಸಿ ಪದವಿಯಂತಹ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಆಯಾ ಜಿಲ್ಲೆಗಳಲ್ಲಿ ಕಾಲೇಜುಗಳೊಂದಿಗೆ ಪರಸ್ಪರ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ವಿಶ್ವವಿದ್ಯಾಲಯದ 371(ಜೆ) ಅಡಿ ಬಡ್ತಿ ಹಾಗೂ ಸೌಕರ್ಯಗಳನ್ನು ಒದಗಿಸಲು ಹಿಂದೇಟು ಹಾಕಲಾಗಿದೆ. ನಾನು ಬೀದರ್‌ ಜಿಲ್ಲೆಯ ಮೂಲದವನಾಗಿರುವ ಕಾರಣ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.