ADVERTISEMENT

ಪಾಪನಾಶ ದೇಗುಲ ಅಭಿವೃದ್ಧಿಗೆ ₹ 5 ಕೋಟಿ ಮಂಜೂರು: ಸಚಿವ ಭಗವಂತ ಖೂಬಾ

ಕೇಂದ್ರ ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾಹಿತಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 8:53 IST
Last Updated 25 ಡಿಸೆಂಬರ್ 2022, 8:53 IST
ಬೀದರ್‌ನ ಪಾಪನಾಶ ದೇಗುಲ ಅಭಿವೃದ್ಧಿಗೆ ಅನುದಾನ ಮಂಜೂರಾದ ಪ್ರಯುಕ್ತ ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ದೇಗುಲಕ್ಕೆ ಭೇಟಿ ಕೊಟ್ಟು, ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು
ಬೀದರ್‌ನ ಪಾಪನಾಶ ದೇಗುಲ ಅಭಿವೃದ್ಧಿಗೆ ಅನುದಾನ ಮಂಜೂರಾದ ಪ್ರಯುಕ್ತ ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ದೇಗುಲಕ್ಕೆ ಭೇಟಿ ಕೊಟ್ಟು, ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು   

ಬೀದರ್: ಪ್ರಸಾದ ಯೋಜನೆಯಡಿ ಆಯ್ಕೆಯಾಗಿರುವ ನಗರದ ಐತಿಹಾಸಿಕ ಪಾಪನಾಶ ದೇಗುಲದ ಅಭಿವೃದ್ಧಿಗೆ ₹ 5 ಕೋಟಿ ಮಂಜೂರಾಗಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಅನುದಾನ ಬಳಸಿಕೊಂಡು ದೇವಸ್ಥಾನದ ಅಭಿವೃದ್ಧಿ ಕೈಗೊಳ್ಳುವ ಹಾಗೂ ಭಕ್ತರಿಗೆ ಅನುಕೂಲ ಮಾಡಿಕೊಡುವ ದಿಸೆಯಲ್ಲಿ ಅಧಿಕಾರಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ದೇವಸ್ಥಾನದಲ್ಲಿ ಶೌಚಾಲಯ ಒಳಗೊಂಡಂತೆ 20 ಕೋಣೆ, ಬಹುಪಯೋಗಿ ಸಭಾಂಗಣ, ಸೋಲಾರ್ ಪೆನಲ್, ಸಾಮಾನ್ಯ ಶೌಚಾಲಯ, ಭಕ್ತರ ಮಾಹಿತಿ ಕೇಂದ್ರ, ಕಾಯುವ ಕೋಣೆಗಳನ್ನು ನಿರ್ಮಿಸಿಕೊಡುವಂತೆ ಆಡಳಿತ ಮಂಡಳಿಯವರು ಕೋರಿದ್ದಾರೆ. ಹೀಗಾಗಿ ವಿವರವಾದ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ದೇಗುಲಕ್ಕೆ ಭೇಟಿ: ಪಾಪನಾಶ ದೇಗುಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ಸಚಿವ ಖೂಬಾ ಅವರು, ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರ ಜತೆ ಚರ್ಚೆ ನಡೆಸಿದರು.

ಸರಿಯಾದ ಕ್ರಿಯಾಯೋಜನೆ ಸಿದ್ಧಪಡಿಸಿ, ಮಾದರಿ ಕೆಲಸ ಮಾಡಬೇಕು. ಅನುದಾನದ ಸದ್ಬಳಕೆ ಆಗಬೇಕು. ದೇವಸ್ಥಾನ ಆಡಳಿತ ಮಂಡಳಿಯವರು ಕಾಮಗಾರಿ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದರು.

ದೇವಸ್ಥಾನದಲ್ಲಿ ಮುಖ್ಯದ್ವಾರ, ಕೊಳದ ಜೀರ್ಣೋದ್ಧಾರ ಕುರಿತು ಸಹ ಚರ್ಚೆ ನಡೆಸಲಾಯಿತು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಪುರಾತತ್ವ ಸಂರಕ್ಷಣೆ ಎಂಜಿನಿಯರ್ ಪ್ರೇಮಲತಾ ಬಿ.ಎಂ, ದೇವಸ್ಥಾನದ ಆಡಳಿತ ಮಂಡಳಿಯ ಚಂದ್ರಕಾಂತ ಶೆಟಕಾರ್, ರಾಜಶೇಖರ ಜವಳೆ, ಸೂರ್ಯಕಾಂತ ಶೆಟಕಾರ್, ರಾಜು ಮೇಟಕಾರಿ, ಸಂಗಮೇಶ ಖೂಬಾ, ರಾಜಶೇಖರ ಖಡಕೆ, ಸೋಮಶೇಖರ ಸಿರಸಂದ, ಶಿವಪುತ್ರಪ್ಪ ಮೆಟಗೆ, ನಾಗರಾಜ ಕರ್ಪೂರ, ಕೃಷ್ಣ ಎಲ್, ಅಮರ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.