ADVERTISEMENT

50 ಮಂದಿ ಕಾರ್ಯಕರ್ತರಿಗೆ ಟ್ಯಾಬ್ ಕೊಡುಗೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 13:56 IST
Last Updated 12 ಸೆಪ್ಟೆಂಬರ್ 2020, 13:56 IST
ಬೀದರ್ ತಾಲ್ಲೂಕಿನ ಚಿಕ್ಕಪೇಟೆಯ ಡೇರಿಯಲ್ಲಿ ಆಯೋಜಿಸಿದ್ದ ಕ್ಯಾಂಟೀನ್ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಜಾನುವಾರು ಕೃತಕ ಗರ್ಭಧಾರಣೆ ಕಾರ್ಯಕರ್ತರಿಗೆ ಮೊಬೈಲ್ ಟ್ಯಾಬ್ ಕೊಡುಗೆಯಾಗಿ ನೀಡಲಾಯಿತು
ಬೀದರ್ ತಾಲ್ಲೂಕಿನ ಚಿಕ್ಕಪೇಟೆಯ ಡೇರಿಯಲ್ಲಿ ಆಯೋಜಿಸಿದ್ದ ಕ್ಯಾಂಟೀನ್ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಜಾನುವಾರು ಕೃತಕ ಗರ್ಭಧಾರಣೆ ಕಾರ್ಯಕರ್ತರಿಗೆ ಮೊಬೈಲ್ ಟ್ಯಾಬ್ ಕೊಡುಗೆಯಾಗಿ ನೀಡಲಾಯಿತು   

ಜನವಾಡ: ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ 50 ಮಂದಿ ಜಾನುವಾರು ಕೃತಕ ಗರ್ಭಧಾರಣೆ ಕಾರ್ಯಕರ್ತರಿಗೆ ಕಲಬುರ್ಗಿ- ಬೀದರ್-ಯಾದಗಿರಿ ಹಾಲು ಒಕ್ಕೂಟವು ಮೊಬೈಲ್ ಟ್ಯಾಬ್ ಕೊಡುಗೆಯಾಗಿ ನೀಡಿದೆ.

ಬೀದರ್ ತಾಲ್ಲೂಕಿನ ಚಿಕ್ಕಪೇಟೆ ಸಮೀಪದ ಡೇರಿಯಲ್ಲಿ ನಡೆದ ಕ್ಯಾಂಟೀನ್ ಕಟ್ಟಡ ಉದ್ಘಾಟನೆ ಹಾಗೂ ಮೊಬೈಲ್ ಟ್ಯಾಬ್ ವಿತರಣೆ ಕಾರ್ಯಕ್ರಮದಲ್ಲಿ ಟ್ಯಾಬ್ ಹಸ್ತಾಂತರಿಸಲಾಯಿತು.

ರಾಷ್ಟ್ರೀಯ ಹೈನು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳನ್ನು ಪಶುಪಾಲಕರು ಬಳಸಿಕೊಳ್ಳಬೇಕಾಗಿದೆ. ಅವರಿಗೆ ಜಾನುವಾರು ಕೃತಕ ಗರ್ಭಧಾರಣೆ ಅರಿವು ಅಗತ್ಯವಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಕಲಬುರ್ಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ ಹೇಳಿದರು.

ADVERTISEMENT

ಹಾಲು ಉತ್ಪಾದಕರು, ಒಕ್ಕೂಟದ ಸಿಬ್ಬಂದಿಯ ಅನುಕೂಲಕ್ಕಾಗಿ ನಿರ್ಮಿಸಿರುವ ಕ್ಯಾಂಟೀನ್ ಕಟ್ಟಡದಲ್ಲಿ ಬರುವ ದಿನಗಳಲ್ಲಿ ಕಡಿಮೆ ದರದಲ್ಲಿ ತಿಂಡಿ, ತಿನಿಸು ದೊರೆಯಲಿವೆ ಎಂದು ತಿಳಿಸಿದರು.

ಜಾನುವಾರು ಕೃತಕ ಗರ್ಭಧಾರಣೆ ಕಾರ್ಯಕ್ರಮದ ಯಶಸ್ಸಿನಲ್ಲಿ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ. ಕಾರ್ಯಕರ್ತರು ಹೆಚ್ಚು ಹೆಚ್ಚು ಜಾನುವಾರು ಕೃತಕ ಗರ್ಭಧಾರಣೆ ಆಗುವಂತೆ ನೋಡಿಕೊಳ್ಳುವ ಮೂಲಕ ಹಾಲು ಉತ್ಪಾದನೆ ವೃದ್ಧಿಗೆ ಶ್ರಮಿಸಬೇಕು. ಮೊಬೈಲ್ ಟ್ಯಾಬ್‍ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ ಸಲಹೆ ಮಾಡಿದರು.

ಒಕ್ಕೂಟವು ರೈತ ಸ್ನೇಹಿಯಾಗಿ ಕಾರ್ಯ ನಿರ್ಹಿಸುತ್ತಿದೆ. ರೈತರು ಕೃಷಿ ಚಟುವಟಿಕೆ ಜತೆಗೆ ಹೈನುಗಾರಿಕೆಯನ್ನೂ ಕೈಗೊಂಡು ಆರ್ಥಿಕ ಅಭಿವೃದ್ಧಿ ಸಾಧಿಸಬೇಕು ಎಂದು ಹೇಳಿದರು.

ಬೀದರ್ ಡೇರಿಯಲ್ಲಿ ಕ್ಯಾಂಟೀನ್ ಕಟ್ಟಡ ನಿರ್ಮಿಸಬೇಕು ಎನ್ನುವುದು ಬಹು ದಿನಗಳ ಬೇಡಿಕೆಯಾಗಿತ್ತು. ಕೊನೆಗೂ ಕಟ್ಟಡ ನಿರ್ಮಾಣಗೊಂಡಿದೆ. ಇದಕ್ಕೆ ಸಹಕರಿಸಿದ ಒಕ್ಕೂಟದ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಕೃತಜ್ಞತೆ ಅರ್ಪಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶಕ ಮಾರುತಿ ಕಾಶೆಂಪೂರ, ಕಲಬುರ್ಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ನಿರ್ದೇಶಕರಾದ ರೇವಣಸಿದ್ದಪ್ಪ ಪಾಟೀಲ, ದಿವಾಕರ ಜಾಗೀರದಾರ್, ಚಂದ್ರಕಾಂತ ಭೂಸನೂರ, ಭೀಮರಾವ್ ಬಳತೆ, ವೀರಣ್ಣ ಝಳಕಿ, ಶ್ರೀಕಾಂತ ದಾನಿ, ಬಂಡುರಾವ್ ಕುಲಕರ್ಣಿ, ಸಂತೋಷ ಗುತ್ತೇದಾರ್, ವಿಠ್ಠಲರೆಡ್ಡಿ, ಅರುಣ ಗುತ್ತೇದಾರ್, ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.