ADVERTISEMENT

‘ಬಸವ ಜಯಂತಿಯಂದೇ ಬಸವ ಉತ್ಸವ ಆಚರಿಸಿ’

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 6:56 IST
Last Updated 6 ಜನವರಿ 2018, 6:56 IST

ಬಸವಕಲ್ಯಾಣ: ‘ಬಸವ ಜಯಂತಿ ದಿನದಂದು ಬಸವ ಉತ್ಸವ ಆಚರಿಸಬೇಕು’ ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಆಗ್ರಹಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಪ್ರತಿವರ್ಷ ಸಭೆ ನಡೆಸಿ ಬೇರೆ ಬೇರೆ ದಿನಾಂಕ ನಿಗದಿಪಡಿಸಬಾರದು. ಒಂದೇ ದಿನಾಂಕ ನಿಗದಿಪಡಿಸಿ ಎರಡು ತಿಂಗಳ ಮೊದಲೇ ಸಿದ್ಧತೆ ಆರಂಭಿಸಬೇಕು. ಇದರಿಂದ ಉತ್ಸವದಲ್ಲಿ ಪಾಲ್ಗೊಳ್ಳಲು ಜನರಿಗೆ ಅನುಕೂಲ ಆಗುತ್ತದೆ. ಅದ್ಧೂರಿ ಕಾರ್ಯಕ್ರಮವೂ ನಡೆಸಬಹುದು.

ಇದಲ್ಲದೆ ಇಲ್ಲಿನ ಎಲ್ಲ ಶರಣ ಸ್ಮಾರಕಗಳ ಅಭಿವೃದ್ಧಿ ಶೀಘ್ರವಾಗಿ ಕೈಗೊಳ್ಳಬೇಕು. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಲ್ಲಿನ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಪಟ್ಟಣದಲ್ಲಿನ ರಸ್ತೆಗಳ ಸ್ಥಿತಿ ತೀರ ಶೋಚನೀಯವಾಗಿದೆ. ತಗ್ಗು ಗುಂಡಿಗಳು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಧೂಳು ಏಳುತ್ತಿದೆ. ಜಿಲ್ಲೆಯವರೆ ಆಗಿರುವ ಈಶ್ವರ ಖಂಡ್ರೆಯವರು ಪೌರಾಡಳಿತ ಸಚಿವರಾಗಿದ್ದು ಇದಕ್ಕಾಗಿ ಅವರು ಅನುದಾನ ಒದಗಿಸಬೇಕು. ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ನೆಡಲಾಗಿದೆ. ಆದರೆ ದೀಪ ಅಳವಡಿಸಲಾಗಿಲ್ಲ. ಸುಮಾರು 600 ದೀಪಗಳನ್ನು ಅಳವಡಿಸಬೇಕಾ ಗಿದೆ. ನಗರಸಭೆ ಯವರು ಈ ಕಾರ್ಯ ಶೀಘ್ರ ವಾಗಿ ನಡೆಸ ಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

‘ತಾಲ್ಲೂಕಿನಲ್ಲಿನ ರೈತರ ಕಬ್ಬನ್ನು ಯಾವುದೇ ಕಾರ್ಖಾನೆಗಳು ಸಕಾಲದಲ್ಲಿ ಸಾಗಿಸದೆ ಇರುವುದರಿಂದ ರೈತರು ತೊಂದರೆ ಅನುಭವಿಸಬೇಕಾಗಿದೆ. ಷೇರು ದಾರರ ಕಬ್ಬು ಶೀಘ್ರವಾಗಿ ಸಾಗಿಸದಿದ್ದರೆ ಕಾರ್ಖಾನೆಗಳ ಎದುರಲ್ಲಿ ರೈತರೊಂದಿಗೆ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

‘ವಿಧಾನಸಭೆ ಚುನಾವಣೆಯಲ್ಲಿ ತಾವು ಜೆಡಿಎಸ್ ಪಕ್ಷದಿಂದಲೇ ಸ್ಪರ್ಧಿಸಲಿದ್ದೇನೆ. ಬೇರೆ ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ. ಅಲ್ಲದೆ ರಾಜ್ಯದಲ್ಲಿಯೂ ಈ ಪಕ್ಷವೇ ಅಧಿಕಾರಕ್ಕೆ ಬರಲಿದೆ. ತಾಲ್ಲೂಕಿನ ಜನರು ತಮ್ಮ ಮೇಲೆ ವಿಶ್ವಾಸವಿಟ್ಟಿದ್ದು ಈ ಸಲವೂ ತಮ್ಮ ಗೆಲುವು ಖಚಿತ. ಈ ಬಗ್ಗೆ ಸಂಶಯ ಬೇಡ’ ಎಂದರು.

ಜೆಡಿಎಸ್ ರಾಜ್ಯ ಘಟಕದ ಕಾರ್ಯದರ್ಶಿ ಕೇಶಪ್ಪ ಬಿರಾದಾರ, ತಾಲ್ಲೂಕು ಘಟಕದ ಅಧ್ಯಕ್ಷ ಶಬ್ಬೀರಪಾಶಾ ಮುಜಾವರ್, ಕಾಳಿದಾಸ ಜಾಧವ, ಸಂಜೀವ ಗಾಯಕವಾಡ, ಮಹಾದೇವ ಹಸೂರೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.