ಬಸವಕಲ್ಯಾಣ: ನಗರ ವ್ಯಾಪ್ತಿಯಲ್ಲಿ ಕೆಲವರು ಆಸ್ತಿಯ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ವಂಚಿಸುತ್ತಿರುವುದು ಕಂಡು ಬಂದಿರುವ ಕಾರಣ ಯಾವುದೇ ಜಾಗ ಖರೀದಿಸುವಾಗ ಎಲ್ಲ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ನಗರಸಭೆ ಆಯುಕ್ತ ರಾಜೀವ ಬಣಕಾರ್ ಸಲಹೆ ನೀಡಿದ್ದಾರೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ನಿವೇಷನ್ ಮತ್ತು ಇತರೆ ಜಾಗ ಖರೀದಿಸುವಾಗ ಸಂಬಂಧಪಟ್ಟ ಇಲಾಖೆಯವರಿಗೆ ಸಂಪರ್ಕಿಸಬೇಕು. ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿನ ವಿನ್ಯಾಸದ ನಕ್ಷೆ ಇದೆಯೋ ಇಲ್ಲವೋ ಅಥವಾ ಮೂಲ ನಕ್ಷೆ ತಿದ್ದಿ ಬೇರೆಯದನ್ನು ಸೃಷ್ಟಿಸಲಾಗಿದೆಯೋ ಎಂಬುದನ್ನು ಪರಿಶೀಲಿಸಬೇಕು. ಕೆಲವರು ವಾಹನ ನಿಲುಗಡೆ ಜಾಗ, ಸರ್ಕಾರಿ ಜಾಗ, ಉದ್ಯಾನದ ಜಾಗ, ರಸ್ತೆಯ ಜಾಗ, ಸಾರ್ವಜನಿಕ ಸೌಲಭ್ಯದ ಜಾಗಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಂಥದಕ್ಕೆ ಸಂಬಂಧಿತ ಇಲಾಖೆಯವರ ಅನುಮತಿ ಇದೆ ಎಂದು ನಂಬಿಸಲಾಗುತ್ತಿದೆ. ಇಂಥ ಮೋಸಗಾರರಿಂದ ದೂರವಿರಬೇಕು ಎಂದಿದ್ದಾರೆ.
ಖರೀದಿಸಿದ ಜಾಗದ ಮ್ಯೂಟೇಷನ್ ತಕ್ಷಣಕ್ಕೆ ಮಾಡಿಕೊಳ್ಳದ ಕಾರಣ ಅದನ್ನು ಇನ್ನಿತರೆ ಜನರಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಕೆಲ ದಲ್ಲಾಳಿಗಳು ನಗರಸಭೆಯಿಂದ ಕೆಲಸ ಮಾಡಿಸಿಕೊಡುವುದಾಗಿಯೂ ಜನರನ್ನು ನಂಬಿಸಿ ಹಣ ಪಡೆಯುತ್ತಿದ್ದಾರೆ. ಇಂಥ ವಂಚಕರಿಂದ ಜಾಗೃತರಾಗಿರಬೇಕು. ಈ ರೀತಿಯಾದರೆ ಸಾರ್ವಜನಿಕರಲ್ಲಿ ಹಾಗೂ ಸರ್ಕಾರಿ ಇಲಾಖೆಗಳ ಮಧ್ಯೆ ಯಾವುದೇ ಗೊಂದಲ ಸೃಷ್ಟಿ ಆಗುವುದಿಲ್ಲ. ಖರೀದಿಸಿದ ಆಸ್ತಿಯೂ ಸುರಕ್ಷಿತ ಆಗಿರುತ್ತದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.