ಬೀದರ್: ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಗಸ್ಟ್ 12 ರಿಂದ 14ರ ವರೆಗೆ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರಲ್ಲಿ `ಬಿದರಿ ಉತ್ಸವ' ಆಯೋಜಿಸಿದೆ.
ಜಿಲ್ಲೆಯ ಸಂಗೀತ ಕಲಾವಿದರಿಗೆ ವೇದಿಕೆ ಒದಗಿಸಲು ಆ. 13ರಂದು ಬಿದರಿ ಗಾಯನ ಸ್ಪರ್ಧೆ ನಡೆಯಲಿದೆ. ಆ. 14 ರಂದು ಖ್ಯಾತ ಸಂಗೀತ ಕಲಾವಿದರ ಬಿದರಿ ಉತ್ಸವದ ಸಂಗೀತೋತ್ಸವ ಮನ ತಣಿಸಲಿದೆ ಎಂದು ವೇದಿಕೆಯ ಅಧ್ಯಕ್ಷೆ
ರೇಖಾ ಅಪ್ಪಾರಾವ್ ಸೌದಿ ತಿಳಿಸಿದ್ದಾರೆ.
ಇದಕ್ಕೂ ಮೊದಲು ಆಗಸ್ಟ್ 12ರಿಂದ ಬಿದರಿ ಉತ್ಸವದ ನಿಮಿತ್ತ ಒಗಟು, ಒಡಪುಗಳನ್ನು ಹೇಳುವ, ಸಾಂಪ್ರದಾಯಿಕ ಜನಪದ ಶೈಲಿಯ ಉಡುಗೆ ತೊಡುಗೆ ಸ್ಪರ್ಧೆ, ಹಿರಿಯ ನಾಗರಿಕರಿಗೆ ದೇಶಿ ಕ್ರೀಡೆ, ಹಿರಿಯ ಚಿತ್ರ ಕಲಾವಿದರಿಂದ ಮೂರು ದಿನ ಚಿತ್ರಕಲಾ ಶಿಬಿರ, ಎಸ್ಸೆಸ್ಸೆಲ್ಸಿ ವರೆಗಿನ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ನೆಹರೂ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ 18 ವರ್ಷ ವಯೋಮಿತಿಯ ಒಳಗಿನ ಜಿಲ್ಲೆಯ ಮೂಲದ ಬಾಲಕ ಹಾಗೂ ಬಾಲಕಿಯರಿಗೆ ಜಿಲ್ಲಾ ಮಟ್ಟದ ವಾಲಿಬಾಲ್ ಹಾಗೂ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಆಗಸ್ಟ್ 12 ರಂದು ಮ್ಯಾರಥಾನ್ ಮೂಲಕ ಬಿದರಿ ಉತ್ಸವಕ್ಕೆ ಚಾಲನೆ ಸಿಗಲಿದೆ. ಬಿವಿಬಿ ಕಾಲೇಜಿನಿಂದ ಹಳೆಯ ನಗರ ಮಾರ್ಗವಾಗಿ ಬರೀದ್ಶಾಹಿ ಉದ್ಯಾನವನದ ವರೆಗೆ ಐತಿಹಾಸಿಕ ಸ್ಮಾರಕ ಸ್ಥಳಗಳನ್ನು ಮೆಲಕು ಹಾಕುವ ಮ್ಯಾರಥಾನ್ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೆಸರು ನೋಂದಣಿಗೆ ಸಂಪರ್ಕಿಸಿ:
`ಬಿದರಿ ಉತ್ಸವ'ದ ಹೊನಲು ಬೆಳಕಿನ ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ತಂಡಗಳು ಶಿವಕುಮಾರ ಗಡ್ಡೆ (9535012159) ಅಥವಾ ಜಯಪ್ರಕಾಶ (9591609691) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.
ಕಬಡ್ಡಿ ತಂಡಗಳು ಶ್ರೀನಿವಾಸ ರೆಡ್ಡಿ (9242440356) ಅಥವಾ ಶಿವರಾಜ ಕಣಜಿ (9242843221) ಕಣಜಿ ಅವರನ್ನು ಸಂಪರ್ಕಿಸಬಹುದು.
ನೋಂದಣಿಗೆ ಸಂಪೂರ್ಣ ಉಚಿತವಾಗಿದೆ. ನೋಂದಣಿಗೆ ಜುಲೈ 10 ಕೊನೆಯ ದಿನವಾಗಿದೆ ಎಂದು ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾವ್ ಸೌದಿ ತಿಳಿಸಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.