ಬೀದರ್: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವರ್ಷದ 12 ತಿಂಗಳೂ ಉಚಿತ ಬಸ್ಪಾಸ್ ಕೊಡಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ವಿದ್ಯಾರ್ಥಿಗಳೊಂದಿಗೆ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಭಗತ್ಸಿಂಗ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮನವಿ ಪತ್ರ ಸಲ್ಲಿಸಿದರು.
ಜಿಲ್ಲೆಯಲ್ಲಿ ಬರಗಾಲ ಇರುವ ಕಾರಣ ಜನ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ಪಾಸ್ ವಿತರಿಸಬೇಕು ಎಂದು ಒತ್ತಾಯಿಸಿದರು.
ಬೀದರ್ ತಾಲ್ಲೂಕಿನ ಚಿಲ್ಲರ್ಗಿ, ಶ್ರೀಮಂಡಲ, ಕಾಶೆಂಪೂರ, ಔರಾದ್ ತಾಲ್ಲೂಕಿನ ಶೆಂಬೆಳ್ಳಿ, ಮಸ್ಕಲ್, ಜಿರ್ಗಾ(ಕೆ), ಅಶೋಕನಗರ ತಾಂಡಾ, ಹುಮನಾಬಾದ್ ತಾಲ್ಲೂಕಿನ ಸಿತಾಳಗೇರಾ, ಅಲ್ಲೂರ, ನಿಂಬೂರ, ವಡ್ಡನಕೇರಾ, ಸುಲ್ತಾನಬಾದ್ವಾಡಿ, ಪಂಢರಗೇರಾ, ಕಲ್ಲೂರ ತಾಂಡಾ, ನಿಂಗದಳ್ಳಿ ಹಾಗೂ ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ, ಸಿಕಂದರಾಬಾದ್ ವಾಡಿ, ರಾಚಪ್ಪ ಗೌಡಗಾಂವ್ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್ ಓಡಿಸಬೇಕು ಎಂದು ಸಾಕಷ್ಟು ಬಾರಿ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸಹ ಕಾರ್ಯದರ್ಶಿ ರೇವಣಸಿದ್ದ ಜಾಡರ್, ಸಂಘಟನಾ ಕಾರ್ಯದರ್ಶಿ ಧನಂಜಯ, ಅರವಿಂದ ಸುಂದಾಳಕರ್, ಸಚಿನ್ ಗುನ್ನಾಳೆ, ಸಂತೋಷ ಹಾಲಹಿಪ್ಪರ್ಗೆ, ಅಶೋಕ ಶೆಂಬೆಳ್ಳಿ, ಶೇಖರ ಬೋಕರೆ, ದಯಾನಂದ ತಿಬಶೆಟ್ಟಿ, ಸಾಯಿಕುಮಾರ, ವಿಕಾಸ, ರಾಜವರ್ಧನ, ಅಂಬ್ರೇಶ, ಸಂಗಮೇಶ, ಸಿದ್ಧಾರೂಢ, ರಾಹುಲ್, ಗುಂಡಾರಡ್ಡಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.