ADVERTISEMENT

ಬೀದರ್‌ | ಭೀಕರ ಅಪಘಾತ; ಮಹಾರಾಷ್ಟ್ರದ ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 15:37 IST
Last Updated 28 ಆಗಸ್ಟ್ 2023, 15:37 IST
ಅಪಘಾತ–ಸಾಂಕೇತಿಕ ಚಿತ್ರ
ಅಪಘಾತ–ಸಾಂಕೇತಿಕ ಚಿತ್ರ   

ಬಸವಕಲ್ಯಾಣ (ಬೀದರ್‌ ಜಿಲ್ಲೆ): ತಾಲ್ಲೂಕಿನ ಚಂಡಕಾಪುರ ಹತ್ತಿರದ ರಾಜ್ಯದ ಸೀಮೆಯಲ್ಲಿ ರಾಷ್ಟ್ರೀಯ ಹೆದ್ದಾರಿ-65ರಲ್ಲಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಾರಾಷ್ಟ್ರದ ಉಮರ್ಗಾ ತಾಲ್ಲೂಕಿನ ನಾಲ್ವರು ಮೃತಪಟ್ಟಿದ್ದಾರೆ.

ಚಲಿಸುತ್ತಿದ್ದ ಆಟೊಗೆ ಹಿಂದಿನಿಂದ ವೇಗವಾಗಿ ಬಂದು ಲಾರಿ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ. ಮೃತರಲ್ಲಿ ಮೂವರು ಒಂದೇ ಕುಟುಂಬದವರಿದ್ದಾರೆ. ಆಟೊ ಚಾಲಕ ಸುನೀಲ್‌ ಜಗದಾಳೆ (40), ಚಾಲಕನ ಪತ್ನಿ ಪ್ರಮೀಳಾ (35), ಚಾಲಕನ ತಾಯಿ ಅನಸೂಯಾ ಮಹಾದೇವ (70) ಹಾಗೂ ಪೂಜಾ ವಿಜಯ ಜಾಧವ (35) ಮೃತರು. ಗೀತಾ ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಮಹಾರಾಷ್ಟ್ರದ ಲಾತೂರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಅಸ್ಮಿತಾ, ಲಕ್ಷ್ಮಿ ಇವರಿಗೂ ಗಾಯಗಳಾಗಿವೆ. ಆಟೊದಲ್ಲಿ ಒಂದೇ ಕುಟುಂಬದ 8 ಜನರು ಇದ್ದರು. ಉಮರ್ಗಾ ತಾಲ್ಲೂಕಿನ ಮುರೂಮ್ ಸಮೀಪದ ಸುಂದರವಾಡಿ ಭಾಗದವರು ಎಂದು ಗೊತ್ತಾಗಿದೆ.

ಶ್ರಾವಣ ಸೋಮವಾರದ ಕಾರಣ ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರದ ಅಮೃತಕುಂಡ ರಾಮಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದರು. ಹಿಂದಿರುಗಿ ಹೋಗುವಾಗ ಹೈದರಾಬಾದ್ ಕಡೆಯಿಂದ ವೇಗವಾಗಿ ಬಂದ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದು ಕೆಳಗೆ ಬಿದ್ದವರ ಮೇಲಿನಿಂದ ಹೋಗಿದೆ. ಹೀಗಾಗಿ ಕೆಲವರ ಕೈ ಕಾಲು ತುಂಡುತುಂಡಾಗಿ ರಸ್ತೆ ಮೇಲೆ ಬಿದ್ದಿದ್ದವು. ಎಲ್ಲೆಡೆ ರಕ್ತ ಮಾಂಸ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. 

ADVERTISEMENT

ಸುದ್ದಿ ತಿಳಿದು ಶಾಸಕ ಶರಣು ಸಲಗರ ಸ್ಥಳಕ್ಕೆ ಭೇಟಿ ನೀಡಿ ಮೃತರನ್ನು ಹಾಗೂ ಗಾಯಾಳುಗಳನ್ನು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸುವುದಕ್ಕೆ ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.