ADVERTISEMENT

ಬೇಸಿಗೆಯಲ್ಲಿ ವಲಸೆ ತಪ್ಪಿಸಲು ಕ್ರಮ

‘ದುಡಿಯೋಣ ಬಾ’ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 3:34 IST
Last Updated 8 ಏಪ್ರಿಲ್ 2021, 3:34 IST
ಚಿಟಗುಪ್ಪ ತಾಲ್ಲೂಕಿನ ಬೆಳಕೇರಾ ಗ್ರಾಮದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಶಂಕರ್‌ ಕನಕ್‌ ‘ದುಡಿಯೋಣ ಬಾ’ ಅಭಿಯಾನಕ್ಕೆ ಚಾಲನೆ ನೀಡಿದರು
ಚಿಟಗುಪ್ಪ ತಾಲ್ಲೂಕಿನ ಬೆಳಕೇರಾ ಗ್ರಾಮದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಶಂಕರ್‌ ಕನಕ್‌ ‘ದುಡಿಯೋಣ ಬಾ’ ಅಭಿಯಾನಕ್ಕೆ ಚಾಲನೆ ನೀಡಿದರು   

ಚಿಟಗುಪ್ಪ: ‘ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಯುವುದಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಮಾರ್ಚ್‌ 15ರಿಂದ ಜೂನ್‌ 15ರ ವರೆಗೆ ಮೂರು ತಿಂಗಳ ಅವಧಿಗೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ‘ದುಡಿಯೋಣ ಬಾ’ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್‌ ಕನಕ್‌ ತಿಳಿಸಿದರು.

ತಾಲ್ಲೂಕಿನ ಬೆಳಕೇರಾ ಗ್ರಾಮದಲ್ಲಿ ಬುಧವಾರ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬೇಸಿಗೆಯಲ್ಲಿ ನಿರಂತರವಾಗಿ ಕೆಲಸ ಒದಗಿಸುವುದು, ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು, ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುವಂತೆ ಮಾಡುವುದು, ಕೆಲಸ ಕಾಮಗಾರಿ ಬೇಡಿಕೆ ಸಲ್ಲಿಸುವ ವಿಧಾನವನ್ನು ಸರಳಗೊಳಿಸುವುದು ಅಭಿಯಾನದ ಉದ್ದೇಶ’ ಎಂದರು.

ADVERTISEMENT

ನರೇಗಾ ಯೋಜನೆ ಸಹಾಯಕ ನಿರ್ದೇಶಕ ಸೂರ್ಯಕಾಂತ ಬೀರಾದಾರ ಮಾತನಾಡಿ, ‘ಬೇಸಿಗೆ ಕಾಲದ ಮೂರು ತಿಂಗಳು ಗ್ರಾಮೀಣ ಭಾಗದ ನಾಗರಿಕರು ಮನೆಯಲ್ಲಿ ಕಾಲ ಕಳೆಯುವ ಬದಲು ದುಡಿಯೋಣ ಬಾ ಯೋಜನೆ ಅಡಿಯಲ್ಲಿ ಪಾಲ್ಗೊಂಡು ಶ್ರಮವಹಿಸಿ ದುಡಿದು ಹಣ ಸಂಪಾದನೆ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯ ಯಶಸ್ಸಿಗೆ ಕಾರಣರಾಗಬೇಕು’ ಎಂದರು.

ಚೆಕ್‌ ಡ್ಯಾಮ್‌ ಹೂಳೆತ್ತುವ 168 ಕಾರ್ಮಿಕರಿಗೆ 20 ಕೂಲಿ ದಿನಗಳ ಉದ್ಯೋಗ ಚೀಟಿ ವಿತರಿಸಲಾಯಿತು.

ಅಭಿವೃದ್ಧಿ ಅಧಿಕಾರಿ ಸುಶಾಂತ್, ಐಇಸಿ ಸಂಯೋಜಕ ವಿಶ್ವನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.