ಜನವಾಡ: ‘ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಸಹಕಾರಿಯಾಗಿದೆ’ ಎಂದು ಬೀದರ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ ಪಾಟೀಲ ಹೇಳಿದರು.
ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ ಬೀದರ್ ತಾಲ್ಲೂಕಿನ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಧ್ಯಾಹ್ನದ ಬಿಸಿಯೂಟ ಮುಖ್ಯ ಅಡುಗೆಯವರು ಹಾಗೂ ಸಹಾಯಕಿಯರಿಗೆ ಬೀದರ್ನ ಆಕ್ಸ್ಫರ್ಡ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಿಸಿಯೂಟ ಸಿಬ್ಬಂದಿ ಅಡುಗೆ ಸಿದ್ಧಪಡಿಸುವ ವೇಳೆ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು.
ರಿಸರ್ಚ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿಶ್ವರಾಧ್ಯ ಹಿರೇಮಠ ಮಾತನಾಡಿ,‘ಮಧ್ಯಾಹ್ನದ ಬಿಸಿಯೂಟ ಯೋಜನೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ವರದಾನವಾಗಿದೆ’ ಎಂದರು.
ಡಾ. ಜ್ಯೋತಿ ಮಾತನಾಡಿ,‘ಅಡುಗೆ ಸಿಬ್ಬಂದಿ ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಹೇಳಿದರು. ‘ಅಡುಗೆ ತಯಾರಿಸುವಾಗ ಸಮವಸ್ತ್ರ ಧರಿಸಬೇಕು. ಶೀತ, ಕೆಮ್ಮು ಬಂದರೆ ಮಾಸ್ಕ್ ಧರಿಸಬೇಕು’ ಎಂದು ತಿಳಿಸಿದರು.
ದೀಕ್ಷಾ ಇಂಡಿಯನ್ ಗ್ಯಾಸ್ ಏಜೆನ್ಸಿಯ ಪೃಥ್ವಿರಾಜ್ ಮತ್ತು ಪ್ರವೀಣ್ ಅವರು ಶಾಲೆಗಳಲ್ಲಿ ಸಿಲಿಂಡರ್ ಬಳಸುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಅಕ್ಷರ ದಾಸೋಹ ಯೋಜನೆಯ ಬೀದರ್ ತಾಲ್ಲೂಕು ಸಹಾಯಕ ನಿರ್ದೇಶಕ ಝಾಕೀರ್ ಹುಸೇನ್, ಡಾ.ವೈಶಾಲಿ, ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ, ಮಹೇಶಕುಮಾರ, ಶಾಲೆಯ ಮುಖ್ಯಶಿಕ್ಷಕ ಉದಯಕುಮಾರ, ಬಸವರಾಜ ಕೆರಾಳೆ ಹಾಗೂ ಮಹೇಶಕುಮಾರ ಧುಪೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.