ADVERTISEMENT

ಔರಾದ್: ಅಮರೇಶ್ವರ ಅದ್ಧೂರಿ ರಥೋತ್ಸವ

ಎಲ್ಲೆಡೆ ಮೊಳಗಿದ ಭಕ್ತರ ಜಯಘೋಷ; ದೇವರಿಗೆ ಕಾಯಿ, ಕರ್ಪೂರ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 3:17 IST
Last Updated 14 ಮಾರ್ಚ್ 2021, 3:17 IST
ಔರಾದ್ ಅಮರೇಶ್ವರ ಜಾತ್ರೆ ಅಂಗವಾಗಿ ಶನಿವಾರ ಬೆಳಗಿನ ಜಾವ ರಥೋತ್ಸವ ಜರುಗಿತು
ಔರಾದ್ ಅಮರೇಶ್ವರ ಜಾತ್ರೆ ಅಂಗವಾಗಿ ಶನಿವಾರ ಬೆಳಗಿನ ಜಾವ ರಥೋತ್ಸವ ಜರುಗಿತು   

ಔರಾದ್: ಭಕ್ತರ ಹರ್ಷೋದ್ಘಾರ ಹಾಗೂ ಜಯಘೋಷಗಳ ನಡುವೆ ಶನಿವಾರ ಬೆಳಗಿನ ಜಾವ ಇಲ್ಲಿಯ ಅಮರೇಶ್ವರ ರಥೋತ್ಸವ ಜರುಗಿತು.

ವೈವಿದ್ಯಮಯ ಹೂ ಮತ್ತು ದೀಪಗಳಿಂದ ಅಲಂಕರಿಸಲಾದ ರಥ ಅಮರೇಶ್ವರ ದೇವಸ್ಥಾನ ಆವರಣದಿಂದ ಹೊರಡುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ‘ಓಂ ಭಲಾ, ಶಂಕರ ಭಲಾ’ ಎಂಬ ಜಯಘೋಷ ಎಲ್ಲೆಡೆ ಮೊಳಗಿತ್ತು. ಭಕ್ತರು ಈ ಸುಂದರ ದೃಶ್ಯ ಕಣ್ಮುಂಬಿಕೊಂಡು ಭಕ್ತಿಭಾವ ಮೆರೆದರು.

ರಸ್ತೆಯ ಎರಡೂ ಬದಿಯಲ್ಲಿ ನಿಂತ ಭಕ್ತರು ರಥೋತ್ಸವವನ್ನು ಸ್ವಾಗತಿಸಿದರು. ಕೈಜೋಡಿಸಿ ಅಮರೇಶ್ವರನಿಗೆ ನಮಿಸಿದರು. ಕೆಲವರು ಶಲ್ಯ ತೊಡಿಸಿ, ಕಾಯಿ ಒಡೆದು ತಮ್ಮ ಇಷ್ಟಾರ್ಥ ಪೂರೈಸಿದರು.

ADVERTISEMENT

ರಥ ಹೋಗುವ ದಾರಿಯುದ್ದಕ್ಕೂ ರಂಗೋಲಿ ಹಾಕಿ ವಿವಿಧ ಬಣ್ಣದ ಹೂ ಹಾಸಲಾಗಿತ್ತು. ಸ್ಥಳೀಯ ಕಲಾವಿದರ ನೃತ್ಯ, ಯುವಕರ ಕೋಲಾಟ, ಡೊಳ್ಳು ಕುಣಿತ ಮೆರವಣಿಗೆ ಕಳೆ ಕಟ್ಟಿತ್ತು. ಜಾತ್ರೆಗೆ ಆಗಮಿಸಿದ ಭಕ್ತರು ಹುಗ್ಗಿ ಪ್ರಸಾದ ಸವಿದು ಸಂಭ್ರಮಿಸಿದರು.

ಅಮರೇಶ್ವರ ದೇವಸ್ಥಾನದಲ್ಲಿ ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ ಕಲಾವಿದರು ಭಜನೆ ಕೀರ್ತನೆ ನಡೆಸಿಕೊಟ್ಟರು.

ರಾತ್ರಿ ಸಂಸದ ಭಗವಂತ ಖೂಬಾ ರಥೋತ್ಸವಕ್ಕೆ ಪೂಜೆ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಬೆಳಿಗ್ಗೆ ಆಗಮಿಸಿ ಅಮರೇಶ್ವರನಿಗೆ ನಮಿಸಿದರು. ಧುರೀಣ ಬಸವರಾಜ ದೇಶಮುಖ, ಶರಣಪ್ಪ ಪಂಚಾಕ್ಷರಿ, ಬಸವರಾಜ ಚಾರೆ, ಶಿವರಾಜ ಅಲ್ಮಾಜೆ, ಡಾ. ಶಂಕರರಾವ ದೇಶಮುಖ, ಸುನೀಲ ಕುಮಾರ ದೇಶಮುಖ, ದಯಾನಂದ ಘುಳೆ, ಶಿವಾನಂದ ಕನಕೆ ಪಾಲ್ಗೊಂಡಿದ್ದರು.

‘ಸ್ಥಳೀಯ ಗಣ್ಯರು ಹಾಗೂ ಭಕ್ತರ ಸಹಕಾರದಿಂದ ಅಮರೇಶ್ವರ ರಥೋತ್ಸವ ಶಾಂತಿಯುತವಾಗಿ ಜರುಗಿದೆ ಎಂದು ತಹಶೀಲ್ದಾರ್‌ ಎಂ.ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ಎಲ್ಲಡೆ ಬಂದೋಬಸ್ತ್‌ ಮಾಡಲಾಗಿತ್ತು. 100 ಜನ ಪೊಲೀಸರು, ಎರಡು ಡಿಎಆರ್ ತಂಡ, ಸ್ವಯಂ ಸೇವಕರ ಪಡೆ ಇಡೀ ರಾತ್ರಿ ರಥೋತ್ಸವ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.