ಔರಾದ್ ಅಮರೇಶ್ವರ ದೇವಸ್ಥಾನ ಮಹಾದ್ವಾರ ಕುಸಿಯುವ ಹಂತಕ್ಕೆ ತಲುಪಿದೆ
ಔರಾದ್: ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಇಲ್ಲಿಯ ಐತಿಹಾಸ ಪ್ರಸಿದ್ಧ ಅಮರೇಶ್ವರ ದೇವಸ್ಥಾನದ ಮಹಾದ್ವಾರ ಕುಸಿಯುವ ಹಂತಕ್ಕೆ ತಲುಪಿದೆ.
ರಾತ್ರಿ ಸುರಿದ ಮಳೆಗೆ ದೇವಸ್ಥಾನದ ಮಂಟಪದಲ್ಲಿ ನೀರು ಬಂದಿದೆ. ಶಿಥಿಲಗೊಂಡ ಮಹಾದ್ವಾರದ ಗೋಡೆ ಮೇಲೆ ಗಿಡಗಳು ಬೆಳೆದಿವೆ. ಮಳೆಯಿಂದ ಕಲ್ಲು ಮಣ್ಣು ಬಿದ್ದು ಭಕ್ತರಲ್ಲಿ ಆತಂಕ ಆವರಿಸಿದೆ.
ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು ಬರುತ್ತಾರೆ. ಸೋಮವಾರ ಹಾಗೂ ಹಬ್ಬದ ವೇಳೆ ಇಲ್ಲಿ ಭಕ್ತರ ದಂಡು ಹರಿದು ಬರುತ್ತದೆ. ತಮ್ಮ ಊರಿಗೆ ಹೋಗಲು ಬಸ್ ಸಿಗದ ಗ್ರಾಮೀಣ ಭಾಗದ ಭಕ್ತರು ರಾತ್ರಿ ದೇವಸ್ಥಾನಲ್ಲೇ ವಾಸ್ತವ್ಯ ಮಾಡುತ್ತಾರೆ. ಹೀಗಿರುವಾಗ ಇಲ್ಲಿ ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ದೇವಸ್ಥಾನ ಆಡಳಿತ ಮಂಡಳಿ ಜವಾಬ್ದಾರಿ. ಆದರೆ ಇಲ್ಲಿ ಆ ಕೆಲಸ ಆಗುತ್ತಿಲ್ಲ ಎಂದು ಸ್ಥಳೀಯ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಶಿಥಿಲ ಮಹಾದ್ವಾರ ತೆರವು ಮಾಡಿ ಅಲ್ಲಿ ಹೊಸ ಮಹಾದ್ವಾರ ಕಟ್ಟುವಂತೆ ಭಕ್ತರ ದಶಕಗಳ ಬೇಡಿಕೆಯಾಗಿದೆ. ಇದಕ್ಕೆ ಬೇಕಾಗುವಷ್ಟು ಅನುದಾನವೂ ದೇವಸ್ಥಾನದ ಖಾತೆಯಲ್ಲಿ ಇದೆ. ಆದರೆ ಸಂಬಂಧಿತರು ಈ ಬಗ್ಗ ಕಾಳಜಿ ತೋರುತ್ತಿಲ್ಲ. ಈ ಬಗ್ಗೆ ಕಾನೂನು ಹೋರಾಟ ಮಾಡುವುದು ಮಾತ್ರ ಬಾಕಿ ಉಳಿದಿದೆ’ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ದೇವಸ್ಥಾನ ಅಕ್ಕ-ಪಕ್ಕದಲ್ಲಿ ಅಂಗಡಿಗಳಿವೆ. ಸೋಮವಾರದ ಸಂತೆ ದಿನ ಇಲ್ಲಿ ಸಾಕಷ್ಟು ಜನ ಬರುತ್ತಾರೆ. ಹೀಗಾಗಿ ದೇವಸ್ಥಾನ ಆಡಳಿತ ಮಂಡಳಿ ತಕ್ಷಣ ಶಿಥಿಲ ಮಹಾದ್ವಾರದ ಬಗ್ಗೆ ಏನಾದರೂ ಒಂದು ನಿರ್ಣಯ ಕೈಗೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ಅಮರೇಶ ಮಸ್ಕಲೆ ಹೇಳುತ್ತಾರೆ.
‘ಅಮರೇಶ್ವರ ದೇವಸ್ಥಾನ ಅಭಿವೃದ್ಧಿ ವಿಷಯದಲ್ಲಿ ಭಕ್ತರು ನನ್ನ ಗಮನಕ್ಕೂ ತಂದಿದ್ದಾರೆ. ಮಹಾದ್ವಾರ ಸೇರಿದಂತೆ ಅಲ್ಲಿ ಏನೇನು ಕೆಲಸ ಆಗಬೇಕು ಎಂಬುದನ್ನು ಖುದ್ದಾಗಿ ನಾನೇ ಭೇಟಿ ನೀಡಿ ಪರಿಶೀಲಿಸಿ ಸಹಾಯಕ ಆಯುಕ್ತರ ಗಮನಕ್ಕೆ ತರುವುದಾಗಿ ತಹಶೀಲ್ದಾರ್ ಮಹೇಶ ಪಾಟೀಲ್ ತಿಳಿಸಿದ್ದಾರೆ.
ಔರಾದ್ ಅಮರೇಶ್ವರ ದೇವಸ್ಥಾನದಲ್ಲಿ ಸದ್ಯ ಏನೇನು ಕೆಲಸ ಆಗಬೇಕು ಅದನ್ನು ಮಾಡಿಕೊಡಲು ಸಹಾಯಕ ಆಯುಕ್ತರ ಗಮನಕ್ಕೆ ತರುತ್ತೇನೆ.ಮಹೇಶ ಪಾಟೀಲ್, ತಹಶೀಲ್ದಾರ್, ಔರಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.