ಮಿರಖಲ್ (ಹುಲಸೂರ): ಗ್ರಾಮ ಪಂಚಾಯಿತಿಯು ಗ್ರಾಮದಲ್ಲಿರುವ ಪುರಾತನ ಕಲ್ಯಾಣಿ ಪುನಃಶ್ಚೇತನ ಮಾಡುತ್ತಿದೆ.
ನರೇಗಾ ಯೋಜನೆಯಡಿ ಐತಿಹಾಸಿಕ ಕಲ್ಯಾಣಿಗಳ ಪುನಃಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಸೂಚಿಸಿತ್ತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾರುದ್ರಪ್ಪ ಭರಮಶೆಟ್ಟೆ ಆಸ್ಥೆ ವಹಿಸಿ ಪುನಃಶ್ಚೇತನ ಕಾರ್ಯ ಆರಂಭಿಸಿದ್ದಾರೆ.
ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಜಮ್ಮು ಮಾತನಾಡಿ,‘ಸರ್ಕಾರವು ಮಳೆಗಾಲದ ಆರಂಭಕ್ಕೂ ಮುನ್ನ ನರೇಗಾ ಯೋಜನೆಯಡಿ ಕೆರೆ-ಕುಂಟೆ, ಕಾಲುವೆಗಳು ಸೇರಿ ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ’ ಎಂದರು.
ಇದರಲ್ಲಿ ಐತಿಹಾಸಿಕ ಕಲ್ಯಾಣಿಗಳ ಪುನಃಶ್ಚೇತನ ಮುಖ್ಯವಾಗಿದೆ. ನಂತರ ಹುಲಸೂರ ಪಟ್ಟಣದಲ್ಲಿಯ ಕಲ್ಯಾಣಿಯ ಅಭಿವೃದ್ಧಿ ಕಾರ್ಯ ಆರಂಭಿಸಲಾಗುವುದು. ಇದರಿಂದ ಅಂತರ್ಜಲ ಮಟ್ಟ ಹಾಗೂ ಗ್ರಾಮದ ಸೌಂದರ್ಯವೂ ಹೆಚ್ಚಲಿದೆ ಎಂದು ಹೇಳಿದರು. ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಜಯಪ್ರಕಾಶ ಚವಾಣ್ ಮಾತನಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾರುದ್ರಪ್ಪ ಭರಮಶೆಟ್ಟೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಭಾಜಿರಾವ ಮೂಳೆ, ತಾ.ಪಂ ನರೇಗಾ ಐಇಸಿ ಸಂಯೋಜಕ ಗಣಪತಿ ಹರಕೂಡೆ, ತಾಂತ್ರಿಕ ಸಂಯೋಜಕ ಮಲ್ಲಿಕಾರ್ಜುನ ಹಾಗೂ ಗ್ರಾ.ಪಂ, ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.