ADVERTISEMENT

ಅನಾಮಧೇಯ ಬೀಜ: ಕೃಷಿ ಇಲಾಖೆಯಿಂದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 14:37 IST
Last Updated 4 ಸೆಪ್ಟೆಂಬರ್ 2020, 14:37 IST

ಬೀದರ್‌: ರೈತರು ಅಪೇಕ್ಷಿಸದ, ಅನುಮಾನಸ್ಪದ ಬೀಜಗಳ ಪೊಟ್ಟಣಗಳನ್ನು ಖರೀದಿಸಬಾರದು. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ.ಗೆ ಮಾಹಿತಿನ ನೀಡಬೇಕು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ರೈತರಿಗೆ ಹಾಗೂ ಬೀಜ ಮಾರಾಟಗಾರರಿಗೆ ತಿಳಿಸಿದ್ದಾರೆ.

ಅಮೆರಿಕ, ಕೆನಡಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಜಪಾನ್ ಹಾಗೂ ಯುರೋಪಿಯನ್ ದೇಶಗಳಲ್ಲಿ ಕೆಲವು ತಿಂಗಳಿಂದ ಸಂಶಯಾಸ್ಪದ ನಿಖರ ಮೂಲವಿಲ್ಲದ ಬೀಜಗಳು ಪಾರ್ಸೆಲ್ ಮೂಲಕ ರೈತರಿಗೆ ಸರಬರಾಜಾಗಿರುವುದು ಕಂಡುಬಂದಿದೆ. ಈ ಬೀಜಗಳು ಹೊರಗಿನ ಆಕ್ರಮಣಕಾರಿ ಜಾತಿಗಳಾಗಿರಬಹುದು. ಇದೊಂದು ಅಪಾಯಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.

ಇದು ಕೃಷಿ ಪರಿಸರ ವ್ಯವಸ್ಥೆಗೆ, ಜೀವವೈವಿಧ್ಯತೆಗೆ ಹಾಗೂ ರಾಷ್ಟ್ರದ ಆಹಾರ ಭದ್ರತೆಗೆ ಗಂಭೀರ ಅಪಾಯವಾಗಬಹುದು. ರೈತರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಬೆಳೆ ಸಮೀಕ್ಷೆ ಅವಧಿ ಸೆ.23ರವರೆಗೆ ವಿಸ್ತರಣೆ

2020-21 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಮಾಡಲು ರೈತರಿಗೆ ಅವಕಾಶ ನೀಡಲಾಗಿದ್ದು, ರಾಜ್ಯದಾದ್ಯಂತ ರೈತರು ಮೊಬೈಲ್ ಆ್ಯಪ್ ಬಳಸಿ ದಿನಾಂಕ ಸೆ.23ರವರೆಗೆ ರೈತರು ಸ್ವಯಂ ಬೆಳೆ ಸಮೀಕ್ಷೆ ಮಾಡಬಹುದಾಗಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ, ಕ್ಷೇತ್ರ, ಖುಷ್ಕಿ,ನೀರಾವರಿ, ಬಹು ವಾರ್ಷಿಕ ತೋಟಗಾರಿಕೆ ಬೆಳೆಗಳ ಮಾಹಿತಿಯನ್ನು ಮೊಬೈಲ್ ಆ್ಯಪ್ ಮೂಲಕ ಸ್ವತಃ ದಾಖಲಿಸಬಹುದು. ಬೆಳೆ ಸಮೀಕ್ಷೆಯನ್ನು ಖಾಸಗಿ ವ್ಯಕ್ತಿಗಳ ಸಹಾಯದೊಂದಿಗೆ ಹಾಗೂ ಇಲಾಖಾ ಅಧಿಕಾರಿಗಳ ನೆರವಿನಿಂದ ಬೆಳೆ ಸಮೀಕ್ಷೆಯನ್ನು ದಾಖಲಿಸಬಹುದಾಗಿದೆ.

ಈ ಬೆಳೆ ಸಮೀಕ್ಷೆಯ ಮಾಹಿತಿಯಿಂದ ಕನಿಷ್ಟ ಬೆಂಬಲ ಬೆಲೆ, ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರಿಗೆ ಬೆಳೆ ಪರಿಹಾರ, ಸಬ್ಸಿಡಿ, ಬೆಳೆ ವಿಮೆ, ಬೆಳೆ ಸಾಲ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ರೈತರಿಗೆ ಅನುಕೂಲವಾಗಲಿದೆ.

ಜಿಲ್ಲೆಯಲ್ಲಿ ಒಟ್ಟು 4,59,531 ರೈತರ ಕ್ಷೇತ್ರಗಳಿದ್ದು, ಇಲ್ಲಿಯವರಗೆ ಹುಮನಬಾದನಲ್ಲಿ-20088, ಬಸವಕಲ್ಯಾಣ-28780, ಚಿಟ್ಟಗುಪ್ಪ-11516, ಹುಲಸೂರ-6245, ಕಮಲನಗರ-10195, ಭಾಲ್ಕಿ-25933, ಬೀದರ್-17684 ಮತ್ತು ಔರಾದ್ ತಾಲ್ಲೂಕಿನಲ್ಲಿ- 12189 ಸೇರಿ ಒಟ್ಟು 132630 ಕ್ಷೇತ್ರಗಳ ಇವೆ.

ರೈತರಿಂದ ಮೊಬೈಲ್ ಆ್ಯಪ್‌ನ ಮೂಲಕ ಬೆಳೆ ವಿವರಗಳನ್ನು ಅಪ್ಲೋಡ್ ಮಾಡಲಾಗಿದೆ. ಉಳಿದ ರೈತರು ಅಂತಿಮ ದಿನಾಂಕದವರೆಗೆ ಕಾಯದೆ ಕೂಡಲೇ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲು ರೈತರಿಗೆ ಮನವಿ ಮಾಡಲಾಗಿದೆ.

ರೈತರು ಆಪ್‌ನಲ್ಲಿ ಮಾಡಿದ ಬೆಳೆ ಸಮೀಕ್ಷೆಯನ್ನು ಸರ್ಕಾರಿ ಅಧಿಕಾರಿಗಳು ಪರಿಶೀಲಿಸಿ ಪ್ರಮಾಣಿಕರಿಸಲಿದ್ದಾರೆ ಮತ್ತು ಇದೇ ದತ್ತಾಂಶವು ಮುಂಬರುವ ದಿನಗಳಲ್ಲಿ ರೈತರಿಗೆ ಹಾಗೂ ಇಲಾಖೆಗಳಿಗೆ ಸಹಕಾರಿಯಾಗಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.