ಬೀದರ್: ಬಸವಕಲ್ಯಾಣದ ಅನುಭವ ಮಂಟಪ ಪ್ರಾಂಗಣದಲ್ಲಿ ನ.29, 30ರಂದು 46ನೇ ಅನುಭವ ಮಂಟಪ ಉತ್ಸವ ಹಾಗೂ ಶರಣ ಕಮ್ಮಟ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸ್ವಾಗತ ಸಮಿತಿ ಅಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ನ.29ರಂದು ಬೆಳಿಗ್ಗೆ 11ಕ್ಕೆ ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಉದ್ಘಾಟಿಸುವರು. ಬಳಿಕ ಗೋಷ್ಠಿಗಳು ಜರುಗಲಿವೆ’ ಎಂದು ಹೇಳಿದರು.
ನಾಡಿನ ಪ್ರಮುಖ ಮಠಾಧೀಶರು, ಬಸವತತ್ವ ಚಿಂತಕರು ಭಾಗವಹಿಸುವರು. ವಿವಿಧ ರಾಜ್ಯಗಳ ಸುಮಾರು 25ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬರುವ ಭಕ್ತರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಬಸವಾದಿ ಶರಣರ ವಿಚಾರಗಳ ಪ್ರಚಾರ, ಪ್ರಸಾರಕ್ಕಾಗಿ ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರು, ಮಾಜಿಸಚಿವ ಭೀಮಣ್ಣಾ ಖಂಡ್ರೆ ಅವರು ದೂರದೃಷ್ಟಿ ಇಟ್ಟುಕೊಂಡು ಈ ಉತ್ಸವ ಆರಂಭಿಸಿದ್ದರು. ಅದನ್ನು ಬಸವಲಿಂಗ ಪಟ್ಟದ್ದೇವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಪ್ರಮುಖರಾದ ಆನಂದ ದೇವಪ್ಪ, ಬಸವರಾಜ ಧನ್ನೂರ, ಜೈರಾಜ ಖಂಡ್ರೆ, ಹಾವಶೆಟ್ಟಿ ಪಾಟೀಲ, ಶಕುಂತಲಾ ಬೆಲ್ದಾಳೆ, ಶಶಿಕಾಂತ ದುರ್ಗೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.