ಬೀದರ್: ಕಲ್ಲು ಗಣಿಗೆ ಹೋಗುವ ರಸ್ತೆಗೆ ಸಂಬಂಧಿಸಿದಂತೆ ಹುಮನಾಬಾದ್ನಲ್ಲಿ ಸಿದ್ದು ಪಾಟೀಲ ಹಾಗೂ ಸಂತೋಷ ಪಾಟೀಲ ಮೇಲೆ ಹಲ್ಲೆ ನಡೆಸಿರುವ ಶರಣರೆಡ್ಡಿ ಹಾಗೂ ಅವರ ಪುತ್ರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದವು.
ಲಿಂಗಾಯತ ಸಮಾಜ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ಯುವ ಬಸವ ಸೇವಾ ಪ್ರತಿಷ್ಠಾನದ ಹುಮನಾಬಾದ್ ತಾಲ್ಲೂಕು ಘಟಕದ ಪದಾಧಿಕಾರಿಗಳು ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂತೋಷ ಪಾಟೀಲ 2006 ರಿಂದ ಕಲ್ಲು ಗಣಿ ನಡೆಸುತ್ತಿದ್ದಾರೆ. ಅದು ನಡೆಯಬಾರದೆಂಬ ಉದ್ದೇಶದಿಂದ ಎರಡು-ಮೂರು ವರ್ಷಗಳ ಹಿಂದೆ ಗಣಿಗೆ ಹೋಗುವ ರಸ್ತೆ ಬಂದ್ ಮಾಡಿದ್ದ ಶರಣರೆಡ್ಡಿ, ನಂತರ ಮತ್ತೆ ವಾಹನಗಳ ಓಡಾಟಕ್ಕೆ ಮುಕ್ತಗೊಳಿಸಿದ್ದರು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಂತೋಷ ಪಾಟೀಲ ಉತ್ತಮ ರಸ್ತೆ ನಿರ್ಮಿಸಿದ ನಂತರ ರಸ್ತೆಯಲ್ಲಿ ತಗ್ಗು ತೋಡಿ ವಾಹನಗಳ ಓಡಾಟಕ್ಕೆ ತಡೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಡಿಸೆಂಬರ್ 12 ರಂದು ಸಂತೋಷ ಗಣಿಗೆ ಹೋದಾಗ ಶರಣರೆಡ್ಡಿ ಅವರ ವ್ಯವಸ್ಥಾಪಕ ಗಣಿಯಲ್ಲಿ ಎಷ್ಟು ವಾಹನಗಳಿವೆ ಎಂದು ಪ್ರಶ್ನಿಸಿ, ಅವುಗಳ ಸಂಖ್ಯೆ ಬರೆದುಕೊಂಡು ಹೆದರಿಸಿದ್ದಾರೆ. ಸಂತೋಷ ಈ ಕುರಿತು ಶರಣರೆಡ್ಡಿ ಅವರನ್ನು ವಿಚಾರಿಸಿದಾಗ ಅವಾಚ್ಯ ಶಬ್ದುಗಳಿಂದ ನಿಂದಿಸಿದ್ದಾರೆ. ಹೀಗಾಗಿ ಅವರು ತಮ್ಮ ಹಿರಿಯ ಸಹೋದರ ಸಿದ್ದು ಪಾಟೀಲ ಅವರಿಗೆ ವಿಷಯ ತಿಳಿಸಿದ್ದಾರೆ. ನಂತರ ಶರಣರೆಡ್ಡಿ ಮನೆಯ ಹತ್ತಿರ ಹೋಗಿ ಪ್ರಶ್ನಿಸಿದಾಗ ಜನರ ಗುಂಪು ಸಿದ್ದು ಪಾಟೀಲ ಹಾಗೂ ಸಂತೋಷ ಪಾಟೀಲ ಮೇಲೆ ಹಲ್ಲೆ ನಡೆಸಿದೆ ಎಂದು ದೂರಿದ್ದಾರೆ.
ಯುವ ಬಸವ ಸೇವಾ ಪ್ರತಿಷ್ಠಾನದ ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಆರ್.ಮಠಪತಿ, ಲಿಂಗಾಯತ ಸಮಾಜದ ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ ಪತ್ರಿ, ವೀರಣ್ಣ ಪಾಟೀಲ, ಸೋಮಶೇಖರ ಪಾಟೀಲ, ಗಂಗಶೆಟ್ಟಿ, ಭೀಮರಾವ್ ಪಾಟೀಲ, ಮಹಾಂತಯ್ಯ ತೀರ್ಥ, ಬಸವರಾಜ ಪಾಟೀಲ ಹಾರೂರಗೇರಿ, ಸಚ್ಚಿದಾನಂದ ಮಠಪತಿ, ಅಶೋಕ ಸೊಂಡೆ, ವಿರೂಪಾಕ್ಷ ಗಾದಗಿ, ಸಂದೀಪ ಪ್ರಭಾ, ನಾಗರಾಜ ಹಿಬಾರೆ, ರಮೇಶ ರೆಡ್ಡಿ ಬೋತಗಿ, ಸಂಜು ಭರಶೆಟ್ಟಿ, ಪ್ರವೀಣ ಪಾಟೀಲ, ಲಿಂಗಾನಂದ ತಿಬಶೆಟ್ಟಿ, ಸಂದೀಪ ಬುಳಗುಂಡಿ, ವಿಜಯಕುಮಾರ ಜಗದಾಳೆ, ಯೂಸೂಫ್ ಸೌದಾಗರ್, ಅವಿನಾಶ ಮುತ್ತಂಗೆ, ಶರಣು ಹಜ್ಜರಗಿ, ಪ್ರಕಾಶ ಕುಲಕರ್ಣಿ, ಮನೋಜ ಸಿತಾಳೆ, ಕಲೀಮೊದ್ದಿನ್, ಗುಂಡುರೆಡ್ಡಿ ಪುಟ್ಟಕಲ್, ಸುಭಾಷರೆಡ್ಡಿ, ಧರ್ಮರೆಡ್ಡಿ ಹುಮನಾಬಾದ್ ಹಾಗೂ ವಿಜಯಕುಮಾರ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.