ADVERTISEMENT

ಬೀದರ್ | ಮುಸ್ಲಿಮರ ಮೇಲೆ ದಾಳಿ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 15:32 IST
Last Updated 1 ಅಕ್ಟೋಬರ್ 2021, 15:32 IST
ದೇಶದ ವಿವಿಧೆಡೆ ಮುಸ್ಲಿಮರ ಮೇಲೆ ನಡೆದಿರುವ ದಾಳಿ ವಿರೋಧಿಸಿ ಬೀದರ್‌ನ ಮೆಹಮೂದ್‌ ಗವಾನ್‌ ಮದರಸಾ ಆವರಣದಲ್ಲಿ ಸರ್ವ ಪಕ್ಷಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ಮುಖಂಡರು ಪ್ರತಿಭಟನೆ ನಡೆಸಿದರು
ದೇಶದ ವಿವಿಧೆಡೆ ಮುಸ್ಲಿಮರ ಮೇಲೆ ನಡೆದಿರುವ ದಾಳಿ ವಿರೋಧಿಸಿ ಬೀದರ್‌ನ ಮೆಹಮೂದ್‌ ಗವಾನ್‌ ಮದರಸಾ ಆವರಣದಲ್ಲಿ ಸರ್ವ ಪಕ್ಷಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ಮುಖಂಡರು ಪ್ರತಿಭಟನೆ ನಡೆಸಿದರು   

ಬೀದರ್: ದೇಶದ ವಿವಿಧೆಡೆ ಮುಸ್ಲಿಮ್‌ ಮುಖಂಡರ ಮೇಲೆ ನಡೆದಿರುವ ದಾಳಿ ಖಂಡಿಸಿ ನಗರದ 25 ಮುಸ್ಲಿಮ್‌ ಸಂಘಟನೆಗಳನ್ನು ಸೇರಿಸಿ ರಚಿಸಲಾದ ಸರ್ವ ಪಕ್ಷಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ಮುಖಂಡರು ನಗರದಲ್ಲಿ ಮೆರವಣಿಗೆ ನಡೆಸಿದರು.

ಓಲ್ಡ್‌ಸಿಟಿಯ ಮೆಹಮೂದ್‌ ಗವಾನ್‌ ಮದರಸಾ ಆವರಣದಲ್ಲಿ ಜಮಾಯಿಸಿ ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಬ್ಯಾನರ್ ಹಾಗೂ ಪೋಸ್ಟರ್‌ಗಳನ್ನು ಹಿಡಿದು ಶಾಂತಿಯುತವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮನವಿಪತ್ರ ಸಲ್ಲಿಸಿದರು.

ಮತಾಂತರದ ಸುಳ್ಳು ಆರೋಪ ಹೊರಿಸಿ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಮೌಲಾನಾ ಕಲೀಂ ಸಿದ್ದಿಕಿ ಸಾಹೇಬ್ ಅವರನ್ನು ಬಂಧಿಸಿದ್ದಾರೆ. ದೆಹಲಿಯಲ್ಲಿ ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೇಹಾದುಲ್ ಮುಸ್ಲಿಮಿನ್ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ಅವರ ನಿವಾಸದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ಮುಸ್ಲಿಮರು ರಾಜಕೀಯವಾಗಿ ಮುಂದೆ ಬರದಂತೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಆಸ್ಸಾಂನಲ್ಲಿ ಅಲ್ಪಸಂಖ್ಯಾತರ ಮೇಲೆ ಪೊಲೀಸ್‌ ದಬ್ಬಾಳಿಕೆ ಹೆಚ್ಚಾಗಿದೆ. ಕೆಲ ಹಿಂದೂಪರ ಸಂಘಟನೆಗಳು ಕೋಮು ಭಾವನೆ ಕೆರಳಿಸುವಲ್ಲಿ ನಿರತವಾಗಿವೆ. ಅಂತಹ ಸಂಘಟನೆಗಳ ಮುಖಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸುಳ್ಳು ಮಾಹಿತಿ ಹಬ್ಬಿಸುತ್ತಿರುವ ಮಾಧ್ಯಮಗಳನ್ನು ನಿಯಂತ್ರಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಬಿತ್ತುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಮನ್ಸೂರ್‌ ಖಾದ್ರಿ ಹಾಗೂ ಮಹಮ್ಮದ್‌ ಗೌಸ್‌ ಖುರೇಶಿ ನೇತೃತ್ವದಲ್ಲಿ ಜಮಾತ್‌ ತಬ್ಲಿಕಿ, ಮುಸ್ಲಿಮ್‌ ಹುಮನ್‌ ರೈಟ್ಸ್‌ ಅಸೋಸಿಯೇಷನ್, ಜಮಾತ್‌ ಉಲ್‌ ಖುರೇಶಿ, ತಫಜ್‌ ಇ–ಖತ್ಮೆ ನೌಬತ್, ಸುನ್ನಿ ದಾವತ್ ಇ–ಇಸ್ಲಾಮಿ, ಮುಸ್ಲಿಮ್‌ ಇ– ಉಲಾಮಾ ವಾಲಾ, ತಾಂಬೋಳಿ, ಕರ್ನಾಟಕ ಮುಸ್ಲಿಮ್‌ ಕೌನ್ಸಿಲ್‌ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.