ADVERTISEMENT

ಕನ್ನಡ ಶಾಲೆ ಉಳಿಯಲು ಆಂದೋಲನ ಅಗತ್ಯ: ಬಸವಲಿಂಗ ಪಟ್ಟದ್ದೇವರು

ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 6:17 IST
Last Updated 1 ಮಾರ್ಚ್ 2026, 6:17 IST
ಔರಾದ್ ತಾಲ್ಲೂಕಿನ ಸಂತಪೂರನಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ದಂಪತಿಗಳಿಗೆ ಬಸವಲಿಂಗ ಪಟ್ಟದ್ದೇವರು ಗೌರವಿಸಿದರು
ಔರಾದ್ ತಾಲ್ಲೂಕಿನ ಸಂತಪೂರನಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ದಂಪತಿಗಳಿಗೆ ಬಸವಲಿಂಗ ಪಟ್ಟದ್ದೇವರು ಗೌರವಿಸಿದರು   

ಔರಾದ್: ‘ಅನೇಕರ ಹೋರಾಟ ಹಾಗೂ ಶ್ರಮದಿಂದ ಈ ಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಉಳಿದಿದ್ದು, ಅವುಗಳ ರಕ್ಷಣೆಗಾಗಿ ನಾವು ಬಹಳ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಬೇಕಾಗುತ್ತದೆ’ ಎಂದು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ತಾಲ್ಲೂಕಿನ ಸಂತಪೂರ ಸುಭಾಷ್ಚಂದ್ರ ಬೋಸ್ ಶಾಲೆಯಲ್ಲಿ ಶನಿವಾರ ನಡೆದ ಗುರುವಂದನೆ ಹಾಗೂ ನಿವೃತ್ತ ಶಿಕ್ಷಕರ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಗಡಿ ಭಾಗದಲ್ಲಿ ಅನೇಕರು ಖಾಸಗಿ ಶಾಲೆ ತೆರೆದು ಆರ್ಥಿಕ ಸಂಕಷ್ಟದಲ್ಲಿ ಕನ್ನಡ ಶಾಲೆ ನಡೆಸಿದ್ದಾರೆ. ಸರ್ಕಾರದ ಸೌಲಭ್ಯ ಇಲ್ಲದ ವೇಳೆ ಬಡ ಮಕ್ಕಳಿಗೆ ಶಿಕ್ಷಣ ನೀಡಿ ಮಾನವೀಯತೆ ಮೆರೆದಿದ್ದಾರೆ. ಆದರೆ ಸರ್ಕಾರದ ನೀತಿಯಿಂದಾಗಿ ಖಾಸಗಿ ಕನ್ನಡ ಶಾಲೆಗಳು ಕೋಮಾ ಸ್ಥಿತಿಗೆ ತಲುಪಿವೆ. ಹೀಗಾಗಿ ಚುರುಕು ಮುಟ್ಟಿಸುವ ರೀತಿಯಲ್ಲಿ ಆಂದೋಲನಕ್ಕೆ ಸಿದ್ಧರಾಗಬೇಕಿದೆ’ ಎಂದು ತಿಳಿಸಿದರು.

ADVERTISEMENT

‘ನಾಲ್ಕು ದಶಕದ ಹಿಂದೆ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಗುರುನಾಥ ದೇಶಮುಖ ಹಾಗೂ ಶಾಲೆಗೆ ಭೂಮಿ ದಾನವಾಗಿ ನೀಡಿದ ಗುರುಲಿಂಗಯ್ಯ ಸ್ವಾಮಿ ಅವರ ಸೇವೆ ಅವಿಸ್ಮರಣೀಯ’ ಎಂದರು.

ಮುಖ್ಯ ಶಿಕ್ಷಕ ಮನೋಹರ ಬಿರಾದಾರ, ನಿವೃತ್ತ ಶಿಕ್ಷಕ ಗುರುನಾಥ ದೇಶಮುಖ ಮಾತನಾಡಿದರು.

ಹೆಡಗಾಪೂರ ದಾರುಕಲಿಂಗ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಸಂಸ್ಥೆ ಅಧ್ಯಕ್ಷ ಶಿವಾಜಿರಾವ ಬೋರಳೆ, ತಾಲ್ಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ, ರೇವಣಸಿದ್ದಪ್ಪ ಜಲಾದೆ, ಶಿವಶಂಕರ ಟೋಕರೆ, ಮನ್ಮಥ ಡೋಳೆ, ವಿಶ್ವದೀಪ ಬೋರಳೆ, ಜ್ಯೋತಿ ಜೀರ್ಗೆ, ಬಸವರಾಜ ಸ್ವಾಮಿ, ಮಲ್ಲಿಕಾರ್ಜುನ ಹಿಪ್ಪಳಗಾವೆ, ನಂದಾದೀಪ ಬೋರಳೆ, ಅಶೋಕ ಶೆಂಬೆಳ್ಳಿ, ಅಮರಸ್ವಾಮಿ, ಆನಂದ ದ್ಯಾಡೆ ಇದ್ದರು.

ವಿವಿಧೆಡೆಯಿಂದ ಆಗಮಿಸಿದ ಹಳೆ ವಿದ್ಯಾರ್ಥಿಗಳು ಶಿಕ್ಷಕ ಗುರುನಾಥ ದೇಶಮುಖ ಹಾಗೂ ಗುರುಲಿಂಗಯ್ಯ ಸ್ವಾಮಿ ದಂಪತಿಗಳನ್ನು ಗೌರವಿಸಿದರು.

ಸಾರೋಟಿನ ಮೆರವಣಿಗೆ

ಸಂತಪೂರ ಸುಭಾಷ್ಚಂದ್ರ ಬೋಸ್ ಶಾಲೆ ವಿದ್ಯಾರ್ಥಿಗಳಿಂದ ನಿವೃತ್ತ ಶಿಕ್ಷಕ ಗುರುನಾಥ ದೇಶಮುಖ ಹಾಗೂ ಗುರುಲಿಂಗಯ್ಯ ಸ್ವಾಮಿ ದಂಪತಿಗಳಿಗೆ ಗ್ರಾಮದ ತುಂಬೆಲ್ಲ ಸಾರೋಟಿನಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು. ಮೆರವಣಿಗೆಯೂದ್ದಕ್ಕೂ ಶಿಷ್ಯ ಬಳಗ ತಮ್ಮ ಗುರುಗಳಿಗೆ ಹೂ ಮಳೆ ಸುರಿದರು. ಜಾನಪದ ಕಲಾವಿದರು ವಿದ್ಯಾರ್ಥಿಗಳ ಕೋಲಾಟ ಮೆರವಣಿಗೆಯ ಕಳೆ ಕಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.