ADVERTISEMENT

ಔರಾದ್: ಪಿಡಿಒ, ಆಡಳಿತಾಧಿಕಾರಿಗಳ ತುರ್ತು ಸಭೆ

ಔರಾದ್: ಗಡಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:25 IST
Last Updated 19 ಫೆಬ್ರುವರಿ 2026, 4:25 IST
ಔರಾದ್ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಚರ್ಚಿಸಲಾಯಿತು
ಔರಾದ್ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಚರ್ಚಿಸಲಾಯಿತು   

ಔರಾದ್: ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಬೇಸಿಗೆ ತೀವ್ರತೆ ಮುನ್ನವೇ ಕುಡಿಯವ ನೀರಿನ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿಯ ತಾಲ್ಲೂಕು ಪಂಚಾಯತ್‌ನಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಯಿತು.

ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದಿರುವುದರಿಂದ ತಾಲ್ಲೂಕಿನ ಎಲ್ಲ 21 ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳ ನೇಮಕ ಮಾಡಲಾಗಿದೆ. ಹೊಸದಾಗಿ ನೇಮಕಗೊಂಡ ಆಡಳಿತಾಧಿಕಾರಿಗಳು, ಪಿಡಿಒಗಳು ಹಾಗೂ ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿಗಳ ಸಭೆ ನಡೆಸಿದ ತಾಲ್ಲೂಕು ಪಂಚಾಯಿತಿ ಇಒ ಕಿರಣ ಪಾಟೀಲ, ಎಲ್ಲರೂ ಮೊದಲು ಕುಡಿಯುವ ನೀರಿನ ಸಮಸ್ಯೆ ಕಡೆ ಹೆಚ್ಚಿನ ಗಮನ ಹರಿಸಲು ಸೂಚಿಸಿದರು.

ಇನ್ನು ಬೇಸಿಗೆ ತೀವ್ರಗೊಳ್ಳುವ ಮೊದಲೇ ಕೆಲ ಕಡೆ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಅಂತಹ ಕಡೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಮುಂದಿನ ನಾಲ್ಕು ತಿಂಗಳು ಜನರಿಗೆ ಕುಡಿಯಲು ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ತಮ್ಮ ತಮ್ಮ ಪಂಚಾಯಿತಿಯಲ್ಲಿ ಏನು ಕೆಲಸ ಆಗಬೇಕು. ಅದಕ್ಕೆ ಎಷ್ಟು ಅನುದಾನ ಬೇಕು ಎಂಬುದರ ಕುರಿತು ಕ್ರಿಯಾ ಯೋಜನೆ ತಯಾರಿಸಿ ಕೊಡುವಂತೆ ತಿಳಿಸಿದರು.

ADVERTISEMENT

ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಂತರ್ಜಲಮಟ್ಟ ಕುಸಿತ, ತೆರೆದ ಬಾವಿಗಳ ಸ್ಥಿತಿಗತಿ, ಹಾಳಾದ ಕೊಳವೆ ಬಾವಿ ದುರಸ್ತಿ, ಟ್ಯಾಂಕರ್ ವ್ಯವಸ್ಥೆ, ಹೊಸ ಕೊಳವೆ ಬಾವಿಗಳ ಬೇಡಿಕೆ ಕುರಿತು ಮಾಹಿತಿ ಸಲ್ಲಿಸುವಂತೆ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ವ್ಯವಸ್ಥಾಪಕ ಸಂಜುಕುಮಾರ, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಇಇ, ಮಾರುತಿ ರಾಠೋಡ್ ಸಭೆಯಲ್ಲಿ ಇದ್ದರು.

ಪ್ರಜಾವಾಣಿ’ ವರದಿ ಉಲ್ಲೇಖ

ಬೇಸಿಗೆ ಮುನ್ನವೇ ಗಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಎಂಬ ಶೀರ್ಷಿಕೆಯಲ್ಲಿ ಪ್ರಜಾವಾಣಿ ಫೆ. 11ರಂದು ಪ್ರಕಟಿಸಿದ ವಿಶೇಷ ವರದಿ ಕುರಿತು ಇಂದಿನ ಸಭೆಯಲ್ಲಿ ಪ್ರಸ್ತಾಪಿಸಿದ ತಾ.ಪಂ. ಇಒ ಕಿರಣ ಪಾಟೀಲ ಇಂತಹ ವರದಿ ಬಂದ ಕೂಡಲೇ ತಾವು ಸ್ಥಳಕ್ಕೆ ಭೇಟಿ ನೀಡಿ ಸ್ಪಂದನೆ ನೀಡಬೇಕು ಎಂದು ಹೇಳಿದರು. ಸಾವರಗಾಂವ್‌ನಲ್ಲಿ ಒಂದು ಹೊಸ ಕೊಳವೆ ಬಾವಿ ಕೊರೆಯಬೇಕು. ಅಲ್ಲಿಯ ತನಕ ಖಾಸಗಿ ನೀರಿನ ಮೂಲ ಬಳಸಿಕೊಂಡು ಜನರಿಗೆ ಕುಡಿಯಲು ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಲು ಪಿಡಿಒ ರಮೇಶ ಅವರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.