ADVERTISEMENT

‘ಐತಿಹಾಸಿಕ ಸ್ಮಾರಕವೆಂದು ಘೋಷಿಸಿ’

ಅಯೋಧ್ಯೆಯಲ್ಲಿ ಬೌದ್ಧ ಧರ್ಮದ ಅವಶೇಷ ಪತ್ತೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 17:19 IST
Last Updated 4 ಜೂನ್ 2020, 17:19 IST
ಬಸವಕಲ್ಯಾಣದಲ್ಲಿ ಗುರುವಾರ ತಹಶೀಲ್ದಾರ್ ಸಾವಿತ್ರಿ ಸಲಗರ ಅವರಿಗೆ ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣ ಕಾಮಗರಿ ಸ್ಥಗಿತಗೊಳಿಸಲು ಆಗ್ರಹಿಸಿ ಮನವಿಪತ್ರ ಸಲ್ಲಿಸಲಾಯಿತು
ಬಸವಕಲ್ಯಾಣದಲ್ಲಿ ಗುರುವಾರ ತಹಶೀಲ್ದಾರ್ ಸಾವಿತ್ರಿ ಸಲಗರ ಅವರಿಗೆ ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣ ಕಾಮಗರಿ ಸ್ಥಗಿತಗೊಳಿಸಲು ಆಗ್ರಹಿಸಿ ಮನವಿಪತ್ರ ಸಲ್ಲಿಸಲಾಯಿತು   

ಬಸವಕಲ್ಯಾಣ: ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣ ಸ್ಥಳದಲ್ಲಿ ಬೌದ್ಧ ಧರ್ಮದ ಅವಶೇಷಗಳು ದೊರೆತಿವೆ. ಆದ್ದರಿಂದ ಶೀಘ್ರ ಮಂದಿರ ನಿರ್ಮಾಣ ಕೆಲಸ ಸ್ಥಗಿತಗೊಳಿಸಿ ಆ ಸ್ಥಳವನ್ನು ಐತಿಹಾಸಿಕ ಸ್ಮಾರಕವೆಂದು ಘೋಷಿಸಬೇಕು ಎಂದು ಅಖಿಲ ಭಾರತೀಯ ಬುದ್ಧಗಯಾ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನ ಸಮಿತಿ ತಾಲ್ಲೂಕು ಘಟಕ ಹಾಗೂ ಅಖಿಲ ಭಾರತ ಭಿಕ್ಕು ಮಹಾಸಂಘ ಮತ್ತು ಬಸವಕಲ್ಯಾಣ ಬೌದ್ಧ ಧಮ್ಮ ಉಪಾಸಕ ಸಮಿತಿಯಿಂದ ಗುರುವಾರ ಇಲ್ಲಿನ ತಹಶೀಲ್ದಾರ್ ಸಾವಿತ್ರಿ ಸಲಗರ ಅವರಿಗೆ ಮನವಿ
ಸಲ್ಲಿಸಲಾಯಿತು.

‘ಸಾಕೇತ್ (ಅಯೋಧ್ಯೆ) ಬೌದ್ಧರ ಪ್ರಾಚೀನ ನಗರವಾಗಿದೆ. ಆದರೆ, ನಂತರದಲ್ಲಿ ಬೌದ್ಧರ ಎಲ್ಲ ಸ್ಮಾರಕಗಳನ್ನು ನೆಲಸಮಗೊಳಿಸಲಾಗಿದೆ. ಇಲ್ಲಿನ ಬೌದ್ಧ ಸ್ಥೂಪ ಇರುವ 100 ಎಕರೆ ಜಾಗವನ್ನು ಕೆಲವರು ಅತಿಕ್ರಿಸಿಕೊಂಡಿದ್ದಕ್ಕೆ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಆದರೆಮ ತೀರ್ಪು ಬೌದ್ಧರ ಪರವಾರಿ ಬರಲಿಲ್ಲ’ ಎಂದು ಹತ್ಯಾಳ ಭಂತೆ ಧಮ್ಮನಾಗ ಅವರು ಹೇಳಿದರು.

‘ಈಚೆಗೆ ಮಂದಿರ ನಿರ್ಮಾಣಕ್ಕಾಗಿ ಕೆಲಸ ನಡೆದಾಗ ಇಲ್ಲಿನ ಎಲ್ಲ ಬೌದ್ಧ ರಚನೆಗಳನ್ನು ನಾಶಪಡಿಸಲಾಗಿದೆ. ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಅನೇಕ ಮೂರ್ತಿಗಳನ್ನು ಒಡೆದು ಧ್ವಂಸ ಮಾಡಲಾಗಿದೆ. ಅಲ್ಲಿರುವ ಬೌದ್ಧ ಸ್ಥೂಪಗಳನ್ನು ನಾಶ ಮಾಡಿರುವ ಬಗ್ಗೆ ವಿನೀತ್ ಮೌರ್ಯ ಎಂಬುವವರು ಸಂಬಂಧಿತರ ಗಮನಕ್ಕೆ ತಂದರೂ ಯಾರೂ ಕ್ರಮ ತೆಗೆದುಕೊಂಡಿಲ್ಲ. ಇನ್ನು ಮುಂದಾದರೂ ಇಲ್ಲಿನ ಬೌದ್ಧ ಸ್ಮಾರಕಗಳನ್ನು ಸಂರಕ್ಷಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಬೌದ್ಧಾಚಾರ್ಯ ರವೀಂದ್ರ ಗಾಯಕವಾಡ, ಬೌದ್ಧಿಷ್ಟ ಸೊಸೈಟಿಯ ತಾಲ್ಲೂಕು ಘಟಕದ ಅಧ್ಯಕ್ಷ ನಾಗನಾಥ ವಾಡೇಕರ್, ಹಿರಿಯ ಮುಖಂಡರಾದ ಮನೋಹರ ಮೈಸೆ, ವಿಠಲರಾವ್ ಗೋಖಲೆ, ರಾಮ ಗೋಡಬೋಲೆ, ಸುರೇಶ ಮೋರೆ, ಸಂಜೀವಕುಮಾರ ಸಂಗನೂರೆ, ಶಿರೋಮಣಿ ನೀಲನೋರ್, ಮನೋಜ ಮುಡಬಿಕರ್, ಮನೋಹರ ಮೋರೆ, ಮಂಗಲ ಶಿಂಧೆ, ರವೀಂದ್ರ ಶಿಂಗಾರೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.