ADVERTISEMENT

ಪ್ರಜಾವಾಣಿ ವಿಶೇಷ: ಆಯುಷ್ಮಾನ್; ಚಿಕಿತ್ಸೆಗೆ ತಪ್ಪದ ಅಲೆದಾಟ

ಕೋವಿಡ್‌ನಿಂದಾಗಿ ಅನ್ಯ ಕಾಯಿಲೆಗಳಿಗೆ ಸವಾಲಾದ ಚಿಕಿತ್ಸೆ

ವರುಣ ಹೆಗಡೆ
Published 28 ಜನವರಿ 2022, 20:33 IST
Last Updated 28 ಜನವರಿ 2022, 20:33 IST
ಡಿ. ರಂದೀಪ್
ಡಿ. ರಂದೀಪ್   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಗೆ ಹಿನ್ನಡೆಯಾಗಿದೆ. ಕೋವಿಡೇತರ ರೋಗಿಗಳಿಗೆ ಯೋಜನೆಯಡಿ ವೈದ್ಯಕೀಯ ಸೇವೆ ಪಡೆದುಕೊಳ್ಳುವುದು ಸವಾಲಾಗಿದೆ.

ದುಬಾರಿ ವೆಚ್ಚದ ಚಿಕಿತ್ಸೆಗಳನ್ನು ಪಡೆಯಲಾಗದ ಬಡ–ಮಧ್ಯಮ ವರ್ಗದ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲೇ ಅದೇ ಮಾದರಿಯ ಚಿಕಿತ್ಸೆ ಉಚಿತವಾಗಿ ಒದಗಿಸುವುದು ಈ ಯೋಜನೆಯ ಗುರಿ. ಆದರೆ, ರಾಜ್ಯದಲ್ಲಿ 2020ರ ಮಾರ್ಚ್‌ನಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಕೋವಿಡೇತರ ಬಹುತೇಕ ಚಿಕಿತ್ಸೆಗಳು ಕಡೆಗಣಿಸಲ್ಪಟ್ಟಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಮೊದಲ ಆದ್ಯತೆ ನೀಡಿ, ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಅದೇ ರೀತಿ, ಖಾಸಗಿ ಆಸ್ಪತ್ರೆಗಳಲ್ಲಿಯೂ ಕೆಲಶಸ್ತ್ರಚಿಕಿತ್ಸೆಗಳನ್ನು ಮುಂದೂಡುವಂತೆ ಸೂಚಿಸಲಾಗುತ್ತಿದೆ. ಇದರಿಂದಾಗಿ ಅನ್ಯ ಕಾಯಿಲೆ ಎದುರಿಸುತ್ತಿರುವವರು ಯೋಜನೆಯಡಿಚಿಕಿತ್ಸೆ ಪಡೆದುಕೊಳ್ಳುವುದು ಸಮಸ್ಯೆಯಾಗಿದೆ.

ಕೋವಿಡ್ ಮೂರನೇ ಅಲೆ ಕಾಣಿಸಿದ ಬಳಿಕ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 19 ಸಾವಿರ ಹಾಗೂ
ಸರ್ಕಾರಿ ಆಸ್ಪತ್ರೆಗಳಲ್ಲಿ 31 ಸಾವಿರ ಹಾಸಿಗೆಗಳನ್ನು ಮೀಸಲಿರಿಲಾಗಿದೆ. 1.94 ಲಕ್ಷ ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಗುರುತಿಸಲಾಗಿದೆ. ಹೀಗಾಗಿ, ಕೋವಿಡೇತರ ಕೆಲ ಚಿಕಿತ್ಸೆಗಳನ್ನು ಸದ್ಯಕ್ಕೆ ಮುಂದೂಡಲು ಇಲಾಖೆಯೇ ಕೋರಿದೆ.

ADVERTISEMENT

ಆಯುಷ್ಮಾನ್ ಮಿಷನ್ ಅಡಿ‌ 2018ರಲ್ಲಿ ಪ್ರಾರಂಭವಾಗಿರುವ ‘ಆಯುಷ್ಮಾನ್ ಭಾರತ್’ ಯೋಜನೆಯಡಿ‌ ವರ್ಷಕ್ಕೆ ₹ 5 ಲಕ್ಷದವರೆಗೆ ಆರೋಗ್ಯ ವಿಮೆ ಕಲ್ಪಿಸಲು ಅವಕಾಶವಿದೆ.

***

ಸರ್ಕಾರಿ ಆಸ್ಪತ್ರೆಗಳಲ್ಲಿ ಸಮಸ್ಯೆಯಾಗದಂತೆ ಈ ಯೋಜನೆಯಡಿ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ. ತುರ್ತಾಗಿ ಅಗತ್ಯವಿಲ್ಲದ ಚಿಕಿತ್ಸೆಗಳನ್ನು ಮುಂದೂಡಲು ಸೂಚಿಸಲಾಗಿತ್ತು

- ಡಿ. ರಂದೀಪ್, ಆರೋಗ್ಯ ಇಲಾಖೆ ಆಯುಕ್ತ
***

ತೃತೀಯ ಹಂತದ ಚಿಕಿತ್ಸೆ ಸವಾಲು

ದ್ವಿತೀಯ ಹಂತದ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಚಿಕಿತ್ಸೆಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಇರದಿದ್ದರೆ ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಬೇಕೆಂಬ ನಿಯಮವಿದೆ. ಈ ಹಂತದ ಚಿಕಿತ್ಸೆಗಳಿಗೆ ಯೋಜನೆ ಪ್ರಾರಂಭವಾದಾಗಿನಿಂದ ಕಳೆದ ವರ್ಷದ ಅಂತ್ಯಕ್ಕೆ 6.61 ಲಕ್ಷ ಮಂದಿ ಮಾತ್ರ ಆರೋಗ್ಯ ಸೇವೆಗಳನ್ನು ಪಡೆದುಕೊಂಡಿದ್ದಾರೆ. ಅವರಲ್ಲಿ ಬಹುತೇಕರಿಗೆ ಮೊದಲು ದಾಖಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆತಿಲ್ಲ. ಹಾಗಾಗಿ, ಶಿಫಾರಸು ಆಧಾರದ ಮೇಲೆ ಖಾಸಗಿ ಆಸ್ಪತ್ರೆಗಳಿಗೆ ತೆರಳಿ, ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಯೋಜನೆಯಡಿ ಚಿಕಿತ್ಸೆ ವಿವರ

ವಲಯ; ದ್ವಿತೀಯ ಹಂತ; ಕ್ಲಿಷ್ಟಕರ ದ್ವಿತೀಯ ಹಂತ; ತೃತೀಯ ಹಂತ; ತುರ್ತುಚಿಕಿತ್ಸೆ

ಬೆಳಗಾವಿ; 2,82,057; 39,691; 68,274; 35,888

ಬೆಂಗಳೂರು; 4,05,208; 98,567; 2,13,765; 54,330

ಕಲಬುರಗಿ; 2,64,916; 25,579; 27,335; 22,505

ಮೈಸೂರು; 3,03,939; 53,892; 1,17,916; 76,447

ಒಟ್ಟು; 12,56,133; 2,18,716; 4,43,025; 1,90,887

* ಯೋಜನೆ ಪ್ರಾರಂಭವಾದಾಗಿನಿಂದ 2021ರ ವರೆಗಿನ ಮಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.