ADVERTISEMENT

ನೇಮಕಾತಿ ವಿಳಂಬ: ‘ಅಹಿಂದ’ಗೆ ಅನ್ಯಾಯ; ಮಾಜಿ ಸಚಿವ ಎಚ್‌.ಸಿ.ಮಹಾದೇವಪ್ಪ ಆರೋ‍‍ಪ

ಸಂವಾದ ಕಾರ್ಯಕ್ರಮದಲ್ಲಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 5:43 IST
Last Updated 4 ಆಗಸ್ಟ್ 2021, 5:43 IST
ಬೀದರ್‌ನಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಎಚ್‌.ಸಿ.ಮಹಾದೇವಪ್ಪ ಮಾತನಾಡಿದರು
ಬೀದರ್‌ನಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಎಚ್‌.ಸಿ.ಮಹಾದೇವಪ್ಪ ಮಾತನಾಡಿದರು   

ಬೀದರ್‌: ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ವಿಳಂಬ ಮಾಡುವ ಮೂಲಕ ಅಹಿಂದ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ’ ಎಂದು ಮಾಜಿ ಸಚಿವ ಎಚ್‌.ಸಿ.ಮಹಾದೇವಪ್ಪ ಆರೋಪಿಸಿದರು.

ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ಜಿಲೆಲಯ ವಿವಿಧ ದಲಿತ ಸಂಘಟನೆಗಳು ಇಲ್ಲಿಯ ಕನ್ನಡ ಸಾಹಿತ್ಯ ಸಂಘದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರ ಬ್ಯಾಕ್‌ಲಾಗ್‌ ಹುದ್ದೆಗಳು ಖಾಲಿ ಇವೆ. ಉದ್ಯೋಗದಲ್ಲಿ ಮೀಸಲಾತಿ ನಿಯಮಗಳ ಜಾರಿಯಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಇದರಿಂದ ಅನೇಕ ಜನ ವಿದ್ಯಾವಂತ ಯುವಕರು ವಯೋಮಿತಿ ಮೀರಿ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಆಡಳಿತಾರೂಢ ಪಕ್ಷದ ಮುಖಂಡರು ಡಾ.ಬಿ.ಆರ್.ಅಂಬೇಡ್ಕರ್ ರಚಿತ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಅಹಿಂದ ಸಮುದಾಯ ಹಾಗೂ ದಲಿತ ಸಂಘಟನೆಗಳು ಒಂದಾಗಿ ಈಗಿನ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆಯುವ ಸಂಕಲ್ಪ ಮಾಡಬೇಕು’ ಎಂದರು.

ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಮನ್ನಾನ್‌ ಸೇಠ್‌ ಅಧ್ಯಕ್ಷತೆ ವಹಿಸಿದ್ದರು. ಅನಿಲಕುಮಾರ ಬೆಲ್ದಾರ್ ಮಾತನಾಡಿದರು. ಅಮೃತರಾವ್ ಚಿಮಕೋಡೆ, ಬಸವರಾಜ ಮಾಳಗೆ, ರಮೇಶ ಡಾಕುಳಗಿ, ಪ್ರದೀಪ ಜಂಜಿರೆ, ಜಾನ್ ವೆಸ್ಲಿ ಹಾಗೂ ಸೋಮನಾಥ ಕಂದಗೂಳೆ ಇದ್ದರು.

ದಲಿತ ಸಂಘಟನೆಯ ಮುಖಂಡರಾದ ಶ್ರೀಪತರಾವ್ ದೀನೆ, ಅಂಬಾದಾಸ್ ಗಾಯಕವಾಡ, ರಾಜಕುಮಾರ ಬನ್ನೇರ್, ಶಿವಕುಮಾರ ನೀಲಿಕಟ್ಟಿ, ಎಂ.ಎಸ್. ಕಟಗಿ, ಮಹಾದೇವ ಕಾಂಬಳೆ, ವಿಠ್ಠಲದಾಸ ಪ್ಯಾಗೆ ಹಾಗೂ ಕಾಶೀನಾಥ ಚೆಲವಾ ಪಾಲ್ಗೊಂಡಿದ್ದರು. ಬಾಬುರಾವ್ ಪಾಸ್ವಾನ್ ಸ್ವಾಗತಿಸಿದರು. ಪ್ರದೀಪ ನಾಟೇಕರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.