ಬಸವಕಲ್ಯಾಣ: ‘ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವ ಹೋರಾಟದಲ್ಲಿ ಅನೇಕ ಮಹಿಳೆಯರು ಭಾಗವಹಿಸಿದ್ದರು. ಅವರ ತ್ಯಾಗ, ಬಲಿದಾನ ದೊಡ್ಡದು’ ಎಂದು ಉಪನ್ಯಾಸಕ ವಿಜಯೇಂದ್ರ ಪಾಂಡೆ ಹೇಳಿದರು.
ನಗರದ ಎಸ್.ಎಸ್.ಕೆ.ಬಸವೇಶ್ವರ ಕಾಲೇಜಿನಲ್ಲಿ ಭಾನುವಾರ ನಡೆದ ವೀರ ವನಿತೆಯರ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ವೀರ ವನಿತೆಯರಾದ ರಾಣಿ ಅಬ್ಬಕ್ಕದೇವಿ, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಅಹಿಲ್ಯಾಬಾಯಿ ಹೊಳ್ಕರ ಅವರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ದೇಶಸೇವೆ ಮಾಡಿದ್ದಾರೆ. ಬ್ರಿಟಿಷರ ವಿರುದ್ಧ ಇವರೆಲ್ಲ ಧೈರ್ಯದಿಂದ ಹೋರಾಡಿದರು’ ಎಂದರು.
ಪ್ರೊ.ಬಸವರಾಜ ಬಾಗ ಮಾತನಾಡಿ,‘ಅನೇಕ ಮಹಿಳೆಯರು ಸ್ವಾತಂತ್ರ್ಯ ಹೋರಾಟ ಕೈಗೊಳ್ಳುವ ಜೊತೆಗೆ ಧರ್ಮ, ಸಂಸ್ಕೃತಿಯ ರಕ್ಷಣೆಗೂ ಕಟಿಬದ್ಧರಾಗಿದ್ದರು. ಅನೇಕ ದೇವಸ್ಥಾನಗಳನ್ನು ಸಂರಕ್ಷಿಸಿದರು’ ಎಂದು ಹೇಳಿದರು.
ಪ್ರಾಚಾರ್ಯ ಶಿವಕುಮಾರ ಪಾಟೀಲ ಮಾತನಾಡಿ,‘ಭಾರತದಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವಾದರ ನೀಡಲಾಗುತ್ತದೆ. ವೀರ ರಾಣಿಯರ ಕಾರ್ಯದಿಂದ ಪ್ರೇರಣೆ ಪಡೆಯಬೇಕು. ದೇಶಭಕ್ತಿ ಬೆಳೆಸಿಕೊಳ್ಳಬೇಕು’ ಎಂದರು.
ಕಲ್ಯಾಣಪ್ಪ ನಾವದಗಿ, ರಮೇಶ ಕೆ.ಬಿ., ಎಂ.ಜಿ.ಪಾಟೀಲ, ವಿಠೋಬಾ ದೊಣ್ಣೆಗೌಡರ್, ನಾಗರತ್ನ, ಭಾರತಿ ಮಠ, ಶಿಲ್ಪಾ ಬಿರಾದಾರ, ರಾಜೇಶ್ರೀ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.