ADVERTISEMENT

ಬಸವಕಲ್ಯಾಣ: ಎಪಿಎಂಸಿಯಲ್ಲಿ ಮೂಲಸೌಕರ್ಯ ಮರೀಚಿಕೆ

ಮಾಣಿಕ ಆರ್ ಭುರೆ
Published 17 ಜೂನ್ 2025, 5:11 IST
Last Updated 17 ಜೂನ್ 2025, 5:11 IST
ಬಸವಕಲ್ಯಾಣದಲ್ಲಿ ನಿರ್ಮಿಸಿದ ಹೊಸ ತರಕಾರಿ ಮತ್ತು ಹಣ್ಣು ಮಾರುಕಟ್ಟೆಯ ಪ್ರವೇಶ ದ್ವಾರಕ್ಕೆ ಬೀಗ ಹಾಕಿರುವುದು 
ಬಸವಕಲ್ಯಾಣದಲ್ಲಿ ನಿರ್ಮಿಸಿದ ಹೊಸ ತರಕಾರಿ ಮತ್ತು ಹಣ್ಣು ಮಾರುಕಟ್ಟೆಯ ಪ್ರವೇಶ ದ್ವಾರಕ್ಕೆ ಬೀಗ ಹಾಕಿರುವುದು    

ಬಸವಕಲ್ಯಾಣ: ಜಿಲ್ಲೆಯಲ್ಲಿನ ಎರಡನೇ ದೊಡ್ಡ ನಗರ, ಉಪವಿಭಾಗದ ಕೇಂದ್ರವೂ ಆಗಿರುವ ಬಸವಕಲ್ಯಾಣದ ಬಸವಗಂಜ್ ಮಾರುಕಟ್ಟೆಯು ಉತ್ಪನ್ನಗಳ ಆವಕ ಮತ್ತು ಮೂಲ ಸೌಕರ್ಯದ ವಿಷಯದಲ್ಲಿ ಹಿಂದುಳಿದಿದೆ. 

‘ಲಾರಿಗಳ ನಗರ’ ಎಂಬ ಖ್ಯಾತಿ ನಗರಕ್ಕಿದ್ದರೂ ಅಂಥ ವಾಹನಗಳಲ್ಲಿ ಕೃಷಿ ಉತ್ಪನ್ನಗಳನ್ನು ಇಲ್ಲಿನ ಎಪಿಎಂಸಿಗೆ ಬರುವುದು ತೀರಾ ಅಪರೂಪ. ಮನೆ ಖರ್ಚಿಗೆ ಹಣ ಹೊಂದಿಸುವುದಕ್ಕಾಗಿ ಆಟೊ, ಟಂಟಂಗಳಲ್ಲಿ ಚೀಲ (ಚುಂಗಡಿ)ಗಳನ್ನು ತಂದು ಮಾರಾಟ ಮಾಡುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ.

ಮಾರುಕಟ್ಟೆ ಪ್ರಾಂಗಣ ನಗರದ ಮಧ್ಯ ಭಾಗದಲ್ಲಿದ್ದು, ಸುತ್ತಲೂ ಮುಖ್ಯ ರಸ್ತೆಗಳು ಹಾದು ಹೋಗಿವೆ. ಈ ರಸ್ತೆಗಳ ಅಕ್ಕಪಕ್ಕದಲ್ಲಿ ಇತರೆ ವ್ಯಾಪಾರ ಭರಾಟೆಯಿಂದ ನಡೆಯುತ್ತದೆ. ಮಾರುಕಟ್ಟೆಯಲ್ಲಿ ರೈತರು ಮಧ್ಯಾಹ್ನ ಉತ್ಪನ್ನ ಮಾರಾಟ ಮಾಡುವುದು, ಇಲ್ಲಿ ದೊರೆತ ನಗದು ಹಣದಿಂದ ಸುತ್ತಲಿನ ಅಂಗಡಿಗಳಿಂದ ಬಟ್ಟೆ, ಸಾಮಗ್ರಿ ಖರೀದಿಸಿ ಸಂಜೆ ಮನೆಗೆ ಹೋಗುವುದು ವಾಡಿಕೆಯಂತಾಗಿದೆ. ಗ್ರಾಮೀಣ ಭಾಗದ ಅಲ್ಪ ಭೂಹಿಡುವಳಿದಾರರಿಗೆ ಪಾಲಿಗೆ ಈ ಮಾರುಕಟ್ಟೆ ಅನುಕೂಲಕರ ಎನ್ನಬಹುದು. 

ADVERTISEMENT
ಬಸವಕಲ್ಯಾಣದ ಎಪಿಎಂಸಿ ಕಚೇರಿ

ತಾಲ್ಲೂಕಿನ ದೊಡ್ಡ ರೈತರು ಕಲಬುರಗಿ ಮತ್ತು ಮಹಾರಾಷ್ಟ್ರದ ಲಾತೂರ್‌, ಕಾಸಾರಶಿರಸಿ, ಔರಾದ್ (ಷಹಾಜಹಾನಿ) ಮಾರುಕಟ್ಟೆಗಳನ್ನು ಅವಲಂಬಿಸಿದ್ದಾರೆ. ಲಾರಿಗಟ್ಟಲೇ ಉತ್ಪನ್ನ ಅಲ್ಲಿಗೇ ಸಾಗಿಸಲಾಗುತ್ತದೆ. ಹೆಚ್ಚಿನ ಬೆಲೆ ಸಿಗುವುದು ಮತ್ತು ಒಂದೇ ಸಲಕ್ಕೆ ಎಲ್ಲ ಹಣ ದೊರಕುವುದು ಇದಕ್ಕಿರುವ ಪ್ರಮುಖ ಕಾರಣ. ಹಾಗೆ ನೋಡಿದರೆ, ಇಲ್ಲಿನ ಕೆಲ ವರ್ತಕರು ಸಹ ಆಗಾಗ ಬೇರೆಡೆಯ ಬೆಲೆ ಕೊಡುತ್ತಿದ್ದರೂ, ಧಾನ್ಯಗಳ ಆವಕದಲ್ಲಿ ಅಷ್ಟೇನೂ ಹೆಚ್ಚಳ ಕಂಡು ಬಂದಿಲ್ಲ.

ಮಾರುಕಟ್ಟೆ ಆವರಣದಲ್ಲಿ ಕೃಷಿ ಉತ್ಪನ್ನಗಳ ಖರೀದಿಯ 40 ಅಂಗಡಿಗಳಿವೆ. ಧಾನ್ಯ ಸಂಗ್ರಹದ ಗೋದಾಮುಗಳು, ಬೀಜ, ಗೊಬ್ಬರ, ಕೀಟನಾಶಕ ಮತ್ತಿತರ ರೈತರಿಗೆ ಅಗತ್ಯವಿರುವ ಸಾಮಗ್ರಿಗಳ ಮಾರಾಟದ ಅಂಗಡಿಗಳು ಕೂಡ ಇವೆ.ಎಪಿಎಂಸಿ ನಡುವಣ ರಸ್ತೆಗಳು ವಿಶಾಲವಾಗಿದ್ದು, ವಾಹನ ದಟ್ಟಣೆ ಆಗುವುದಿಲ್ಲ. ಆದರೆ, ಚರಂಡಿಗಳು ಶುಚಿತ್ವ ಕೊರತೆ ಎದುರಿಸುತ್ತಿವೆ. ಗಟಾರಗಳು ಯಾವಾಗಲೂ ಕಸ,ಕಡ್ಡಿ, ಕೊಳೆಚೆಯಿಂದ ತುಂಬಿ ದುರ್ನಾತ ಹೊಮ್ಮುತ್ತಿರುತ್ತದೆ. ಶೌಚಾಲಯ, ಮೂತ್ರಾಲಯಗಳ ಕೊರತೆ ಕಾಡುತ್ತಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ.

ಬಸವಕಲ್ಯಾಣದ ಎಪಿಎಂಸಿ ಮಾರುಕಟ್ಟೆಗೆ ಚಿಕ್ಕ ವಾಹನದಲ್ಲಿ ತಂದಿದ್ದ ಚೀಲಗಳನ್ನು ಒಯ್ಯುತ್ತಿರುವುದು

‘ಈ ಮಾರುಕಟ್ಟೆಯಲ್ಲೂ ರೈತರ ಕೃಷಿ ಉತ್ಪನ್ನಗಳಿಗೆ ಬೇರೆ ಮಾರುಕಟ್ಟೆಗಳಲ್ಲಿನಂತೆ ಉತ್ತಮ ಬೆಲೆ ಸಿಗುವಂತಾಗಬೇಕು. ದವಸ ಧಾನ್ಯಗಳ ಸ್ವಚ್ಛತೆ ಹೆಸರಲ್ಲಿ ಹಣ ಪಡೆಯಬಾರದು. ಎಪಿಎಂಸಿ ಶುಲ್ಕದಲ್ಲೂ ರಿಯಾಯಿತಿ ನೀಡಬೇಕು. ಪ್ರಾಂಗಣದಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಹೀಗಾದರೆ ರೈತರು ಎಲ್ಲ ಉತ್ಪನ್ನಗಳನ್ನು ಇಲ್ಲಿಗೆ ತಂದು ಮಾರಾಟ ಮಾಡಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ರೈತ ಶಿವಪ್ಪ ಪಾಟೀಲ.

ಬಸವಕಲ್ಯಾಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿನ ಚರಂಡಿ ಕಸದಿಂದ ತುಂಬಿರುವುದು
ಬಸವಕಲ್ಯಾಣದ ಎಪಿಎಂಸಿ ಮಾರುಕಟ್ಟೆಯ ಚರಂಡಿಯಲ್ಲಿ ನೀರು ಸಂಗ್ರಹಗೊಂಡಿದೆ
ದವಸ ಧಾನ್ಯಗಳಿಗೆ ದೊಡ್ಡ ಮಾರುಕಟ್ಟೆಗಳಲ್ಲಿನ ಬೆಲೆಯೇ ಇಲ್ಲಿ ಸಿಗುವಂತಾಗಬೇಕು. ಗ್ರಾಮೀಣ ರೈತರ ವಾಸ್ತವ್ಯಕ್ಕಾಗಿ ರೈತ ಭವನದ ದುರಸ್ತಿ ಕೈಗೊಳ್ಳಬೇಕು
ಸುಭಾಷ ರಗಟೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ
ಮಾರುಕಟ್ಟೆ ಆವರಣದಲ್ಲಿ ನಿಯಮಿತವಾಗಿ ಸ್ವಚ್ಛತೆ ಕೈಗೊಳ್ಳದೆ ತೊಂದರೆ ಅನುಭವಿಸಬೇಕಾಗಿದೆ. ಸಾಮೂಹಿಕ ಮೂತ್ರಾಲಯ ಶೌಚಾಲಯದ ವ್ಯವಸ್ಥೆ ಆಗಬೇಕು
ವೀರೇಶ ಬೋರಗೆ ರೈತ
ತರಕಾರಿ ಮಾರುಕಟ್ಟೆಗೆ ಬೀಗ
ಮುಖ್ಯ ಬಸ್‌ನಿಲ್ದಾಣದ ಹಿಂದುಗಡೆ ₹3 ಕೋಟಿ ವೆಚ್ಚದಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಹೊಸದಾಗಿ ತರಕಾರಿ ಮತ್ತು ಹಣ್ಣು ಮಾರುಕಟ್ಟೆ ನಿರ್ಮಿಸಿದ್ದರೂ ಪ್ರವೇಶ ದ್ವಾರಕ್ಕೆ ಬೀಗ ಹಾಕಲಾಗಿದೆ. ಇಲ್ಲಿ 30ಕ್ಕೂ ಅಧಿಕ ಮಳಿಗೆಗಳು ಮಾರಾಟದ ಪ್ರಾಂಗಣ ಇದೆ. ಆವರಣದಲ್ಲಿ ಮಳೆ ನೀರು ಸಂಗ್ರಹಗೊಳ್ಳದಂತೆ ಹಾಗೂ ಕೆಸರು ಆಗದಂತೆ ವ್ಯವಸ್ಥೆಗೈಯಬೇಕಾಗಿದೆ. ಬೇರೆ ಕಡೆ ಖಾಸಗಿ ಜಾಗದಲ್ಲಿ ತರಕಾರಿ ಮಾರುಕಟ್ಟೆ ಇದ್ದು ಅಲ್ಲಿ ಶುಚಿತ್ವದ ಕೊರತೆ ಕಾಡುತ್ತಿದೆ. ಆದ್ದರಿಂದ ಎಪಿಎಂಸಿಯ ಈ ಹೊಸ ಮಾರುಕಟ್ಟೆಯನ್ನು ಶೀಘ್ರದಲ್ಲಿ ಉದ್ಘಾಟಿಸಬೇಕು ಎಂಬುದು ಜನರ ಆಗ್ರಹವಾಗಿದೆ. ‘ಈ ಸ್ಥಳದಲ್ಲಿ ಇನ್ನೂ ವಿದ್ಯುತ್ ಸಂಪರ್ಕವಿಲ್ಲ. ಇತರೆ ಕೆಲ ವ್ಯವಸ್ಥೆ ಒದಗಿಸಿದ ನಂತರ ಇಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುವುದು’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಸಂತೋಷ ಮುದಗೊಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.